ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಉತ್ತರ ಕರ್ನಾಟಕದ ಸೊಗಡು ಅನಾವರಣಗೊಂಡಿತ್ತು.
ಯುವಕರು, ಹಿರಿಯರು ಉತ್ತರ ಕರ್ನಾಟಕದ ಸಾಂಪ್ರಾಯಿಕ ಉಡುಗೆ–ಧರಿಸಿ ಸಂಭ್ರಮದಿಂದ ಕಾರ್ಯಕ್ರಮಕ್ಕೆ ಬಂದಿದ್ದರು.
ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘ ಶನಿವಾರ ಆಯೋಜಿಸಿದ್ದ ‘ಬನ್ನಿ’ ಬಂಗಾರ ಮತ್ತು ಉತ್ತರ ಕರ್ನಾಟಕ ಸಾಂಸ್ಕೃತಿಕ ಉತ್ಸವದಲ್ಲಿ ಕಂಡು ಬಂದ ನೋಟಗಳಿವು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ‘ನಾನು ಇಂದಿಗೂ ಉತ್ತರ ಕರ್ನಾಟಕ ಮತ್ತು ನನ್ನೂರು ಘೋಡಗೇರಿಯ ಭಾಷೆಯಲ್ಲೇ ಬರೆಯುತ್ತೇನೆ. ಈ ಭಾಷೆಯಿಂದಲೇ ಬೆಳೆದಿದ್ದೇನೆ. ಈ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಹೇಳಿದರು.
‘ನಾನೀಗ ಬೆಂಗಳೂರು ಸೇರಿ 52 ವರ್ಷಗಳಾದರೂ ಉತ್ತರ ಕರ್ನಾಟಕದ ಸೊಗಡು ಬಿಟ್ಟುಕೊಟ್ಟಿಲ್ಲ. ಉತ್ತರ ಕರ್ನಾಟಕ ಜನಜೀವನದ ಬಗ್ಗೆ ನಿರಂತರವಾಗಿ ಬರೆಯುತ್ತಿದ್ದೇನೆ. ಇಂತಹ ವಿಭಿನ್ನವಾಗಿರುವ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು’ ಎಂದು ಹೇಳಿದರು.
ಸಂಗಮೇಶ ಬಾದವಾಡಗಿ ಅವರ ‘ರೊಟ್ಟಿ ಪಂಚಮಿ’ ಪುಸ್ತಕವನ್ನು ಚಂದ್ರಶೇಖರ ಕಂಬಾರ ಅವರು ಬಿಡುಗಡೆ ಮಾಡಿದರು. ಗಾಯಕಿ ಸಂಗೀತ ಕಟ್ಟಿ ಅವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಚಂದ್ರು ರಾಮನಗರ ಅವರಿಂದ ಡೊಳ್ಳು ಕುಣಿತ, ಕುಕನೂರಿನ ಗೊರ್ಲೆಕೊಪ್ಪದ ಶರಣಯ್ಯ ಮಾಲಿ ಪಾಟೀಲ ಅವರ ತಂಡದಿಂದ ಕರಡಿ ಮಜಲು ಹಾಗೂ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ತಂಡದಿಂದ ಸಮೂಹ ನೃತ್ಯ ನಡೆಯಿತು.
ಮುಖಂಡರಾದ ಬಸವರಾಜ ದಿಂಡೂರು ಹಾಗೂ ಸಂಘದ ಅಧ್ಯಕ್ಷ ಮುರಿಗೇಶ ಜವಳಿ, ಗೌರವ ಕಾರ್ಯದರ್ಶಿ ಶಂಕರ ಪಾಟೀಲ, ಉಪಾಧ್ಯಕ್ಷ ಕಲ್ಲಪ್ಪ ನವಣಿ, ನಿರ್ದೇಶಕರಾದ ವಿರೂಪಾಕ್ಷಪ್ಪ ಸಾಂಬ್ರಾಣಿ, ಎಸ್.ಪಿ. ದಯಾನಂದ, ಶಂಕರ ಪಾಗೋಜಿ, ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಮೇಟಿ ಇದ್ದರು.