ಬೆಂಗಳೂರು: ಕರ್ನಾಟಕದಲ್ಲಿ ಇತಿಹಾಸ ನಿರ್ಮಾಣ ಮಾಡಿರುವ ಒನಕೆ ಓಬವ್ವನವರ ಸಾಧನೆ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಲ್ಲು ರಾಜ್ಯದಲ್ಲಿ ಒನಕೆ ಓಬವ್ವ ಅಧ್ಯಯನ ಪೀಠ ತೆರೆಯಬೇಕು ಎಂದು ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಒತ್ತಾಯಿಸಿದರು.
ಸಮತಾ ಸೈನಿಕ ದಳ ಆಯೋಜಿಸಿದ್ದ ದಿವಂಗತ ಪ್ರೊ.ಎ.ಡಿ.ಕೃಷ್ಣಯ್ಯ ಅವರು ಬರೆದಿರುವ ಒನಕೆ ಓಬವ್ವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಒನಕೆ ಓಬವ್ವನ ಮೊದಲ ಜಯಂತಿಯನ್ನು ಚಿತ್ರದುರ್ಗದಲ್ಲಿ ಆಯೋಜನೆ ಮಾಡಿದ್ದೆವು. ಪೂಲನ್ ದೇವಿ ಅವರನ್ನು ಈ ಕಾರ್ಯಕ್ರಮಕ್ಕೆ ಕರೆಸಿದ್ದೆವು. ಸಾಧಕ ಮಹಿಳೆ ಓಬವ್ವ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯುವ ಅಗತ್ಯವಿದೆ. ಚಲವಾದಿ ಸಮುದಾಯ ಸಾಂಸ್ಕೃತಿಕವಾಗಿ ಸದಾ ನೆನಪಿಸಿಕೊಳ್ಳಬೇಕು’ ಎಂದರು.
ಪುಸ್ತಕ ಬಿಡುಗಡೆ ಮಾಡಿದ ಸಾಹಿತಿ ಬಿ.ಟಿ.ಲಲಿತಾನಾಯಕ್, ‘ಇತಿಹಾಸದಲ್ಲಿ ಮರೆಮಾಚಿರುವ ಅನೇಕ ಪ್ರಕರಣಗಳಿವೆ. ಮರೆತುಹೋಗಿರುವ ಇತಿಹಾಸವನ್ನು ಪುಸ್ತಕ ಪ್ರಕಟಿಸುವ ಮೂಲಕ ಹೊರಕ್ಕೆ ತಂದಿರುವುದು ಉತ್ತಮವಾದ ಕೆಲಸ’ ಎಂದು ಹೇಳಿದರು.
ಚಲವಾದಿ ಗುರುಪೀಠದ ಬಸವನಾಗಿ ದೇವ ಸ್ವಾಮೀಜಿ ಮಾತನಾಡಿ, ‘ಸಂವಿಧಾನಕ್ಕೆ ಗೌರವ ಕೊಡುವ ಕೆಲಸವಾದರೆ, ಇತಿಹಾಸವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಸಾಧ್ಯ’ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಎಂ.ಸುಮಿತ್ರಾ, ಎಫ್ಎಸ್ಎಲ್ ವಿಜ್ಞಾನಿ ಎಂ.ವಿ.ಸೌಮ್ಯಾ, ಜೀತ ವಿಮುಕ್ತ ಹೋರಾಟಗಾರ್ತಿ ಪೂರ್ಣಿಮಾ ಮಧುಕರ್, ತೃತೀಯ ಲಿಂಗಿ ಸಮುದಾಯದ ಪರ ಹೋರಾಟಗಾರ್ತಿ ಸವಿತಾ ಅವರಿಗೆ ಒನಕೆ ಓಬವ್ವ ಪ್ರಶಸ್ತಿ ಪ್ರದಾನ ಮಾಡಲಾಯಿತು.