ಬೆಂಗಳೂರು: ‘ನಗರದ ಎಂ.ಜಿ. ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗದ ‘ಟಾನಿಕ್’ ಮದ್ಯ ದಂಗಡಿಯು ಸಮೀಪದ ಚರ್ಚ್ ಹಾಗೂ ಡಿಸಿಪಿ ಕಚೇರಿಯಿಂದ ಎಷ್ಟು ಮೀಟರ್ ದೂರವಿದೆ ಎಂಬ ಬಗ್ಗೆ ಸರ್ವೇ ನಡೆಸಿ ವರದಿ ಸಲ್ಲಿಸಿ’ ಎಂದು ಸ್ಥಳೀಯ ತಹಶೀಲ್ದಾರ್ಗೆ ಹೈಕೋರ್ಟ್ ಸೂಚಿಸಿದೆ.
ಮದ್ಯದಂಗಡಿಗೆ ಪರವಾನಗಿ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ವಕೀಲ ಎ.ವಿ. ಅಮರನಾಥನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
‘ಸರ್ವೇ ನಡೆಸುವ ದಿನಾಂಕ ನಿಗದಿಪಡಿಸಿ, ಆ ಬಗ್ಗೆ ಮುಂಚಿತವಾಗಿಯೇ ಅರ್ಜಿದಾರರಿಗೆ ಹಾಗೂ ಮದ್ಯದಂಗಡಿಯ ಮಾಲೀಕರಿಗೆ ಮಾಹಿತಿ ನೀಡಬೇಕು.ಸರ್ವೇ ವರದಿಯನ್ನು ಇದೇ 28ಕ್ಕೆ ಸಲ್ಲಿಸಬೇಕು’ ಎಂದು ನಿರ್ದೇಶಿಸಿ, ಇದೇ 29ಕ್ಕೆ ವಿಚಾರಣೆ ಮುಂದೂಡಲಾಗಿದೆ.