ಬೆಂಗಳೂರು: ಪಂಚಮಸಾಲಿ ಸಮಾಜಕ್ಕೆ 2ಎ ಹಾಗೂ ಲಿಂಗಾಯತ ಸಮುದಾಯಕ್ಕೆ ಕೇಂದ್ರದ ಒಬಿಸಿ ಮೀಸಲಾತಿಗೆ ಒತ್ತಾಯಿಸಿ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಜ.14 ರಿಂದ ಪಾದಯಾತ್ರೆ ನಡೆಸಲಾಗುವುದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
'ದಿನಕ್ಕೆ 20 ಕಿ.ಮೀ. ನಂತೆ ಸುಮಾರು 700 ಕಿ.ಮೀ.ವರೆಗಿನ ಈ ಪಾದಯಾತ್ರೆ ಒಂದು ತಿಂಗಳು ನಡೆಯುವುದು. ಕೊನೆಯ ದಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಈ ಸಂದರ್ಭದಲ್ಲಿ ಕನಿಷ್ಠ ಐದು ಲಕ್ಷ ಜನ ಸೇರಲಿದ್ದಾರೆ' ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
'ಶನಿವಾರ (ಜ.9) ಸರ್ಕಾರದ ನಿಯೋಗ ಕೂಡಲಸಂಗಮಕ್ಕೆ ಭೇಟಿ ನೀಡಲಿದೆ. ಈ ಸಂದರ್ಭದಲ್ಲಿ ಸರ್ಕಾರದಿಂದ ಖಚಿತ ಭರವಸೆ ದೊರೆಯುವ ವಿಶ್ವಾಸವಿದೆ. ಮಹತ್ವದ ಸಭೆಯೂ ನಡೆಯಲಿದೆ. ಸಭೆ ಸಮಾಧಾನ ತರದಿದ್ದರೆ ಪಾದಯಾತ್ರೆ ನಡೆಸುವುದು ನಿಶ್ಚಿತ' ಎಂದೂ ಹೇಳಿದರು.