ಬೆಂಗಳೂರು: ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣ ಅ.12ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ ಆರನೇ ಸೆಮಿಸ್ಟರ್ನ ‘ಪ್ರಿನ್ಸಿಪಲ್ಸ್ ಆ್ಯಂಡ್ ಪ್ರಾಕ್ಟೀಸ್ ಆಫ್ ಆಡಿಟಿಂಗ್’ (ಪಿಪಿಎ) ವಿಷಯದ ಪರೀಕ್ಷೆಯನ್ನು ಅ.17ಕ್ಕೆ ಮುಂದೂಡಲಾಗಿದೆ.
ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ವಾಣಿಜ್ಯ ವಿಭಾಗದ ಪಿಪಿಎ ವಿಷಯದ ಪರೀಕ್ಷೆಯು ಸೋಮವಾರ ಮಧ್ಯಾಹ್ನ 2 ಗಂಟೆಗೆ ನಡೆಯಬೇಕಿತ್ತು. ಆದರೆ, ಕಿಡಿಗೇಡಿಗಳು ಅಂದು ಬೆಳಿಗ್ಗೆ 11.30ರ ವೇಳೆಗೆ ಪ್ರಶ್ನೆಪತ್ರಿಕೆಯ ಫೋಟೊಗಳನ್ನು ವಾಟ್ಸ್ ಆಪ್ ಮೂಲಕ ಹರಿಬಿಟ್ಟಿದ್ದರು.
ಇದು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಮೊಬೈಲ್ಗಳಿಗೂ ರವಾನೆಯಾಗಿತ್ತು. ಕೂಡಲೇ ಈ ವಿಷಯವನ್ನು ವಿಶ್ವವಿದ್ಯಾಲಯದ ಗಮನಕ್ಕೆ ತಂದ ಕಾರಣ, ಪರೀಕ್ಷೆ ಸ್ಥಗಿತಗೊಳಿಸಲಾಯಿತು.
‘ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಕುರಿತು ತನಿಖೆ ನಡೆಸುವಂತೆ ಜ್ಞಾನಭಾರತಿ ಠಾಣೆ ಹಾಗೂ ಸಿಸಿಬಿಗೆ ದೂರು ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ತಿಳಿಸಿದ್ದಾರೆ.
‘ಹೊಸ ಪ್ರಶ್ನೆಪತ್ರಿಕೆಯೊಂದಿಗೆ ಅ.17ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಪರೀಕ್ಷೆ ನಡೆಯಲಿದೆ’ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.