ಬೆಂಗಳೂರು: ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿದ್ದ ಆರೋಪದಡಿ ಕಟ್ಟಡ ನಿರ್ಮಾಣದ ಗುತ್ತಿಗೆದಾರ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಲಗ್ಗೆರೆಯ ರಮೇಶ್ (42), ಚಂದ್ರು (35), ಮಹಾಲಕ್ಷ್ಮಿ ಲೇಔಟ್ನ ಸತೀಶ್ (33) ಹಾಗೂ ನಾಗೇಶ್ (33) ಬಂಧಿತರು. ಅವರಿಂದ ಪಿಸ್ತೂಲ್, ₹28 ಲಕ್ಷ ನಗದು ಹಾಗೂ ಕಾರು ಜಪ್ತಿ ಮಾಡಲಾಗಿದೆ.
‘ಕಟ್ಟಡ ನಿರ್ಮಾಣದ ಗುತ್ತಿಗೆದಾರ ರಮೇಶ್ ಹಾಗೂ ಇತರೆ ಆರೋಪಿಗಳು ಆರ್.ಎಂ.ಸಿ ಯಾರ್ಡ್ ಸಮೀಪದ ಕಾಲೇಜೊಂದರ ಬಳಿ ಕಾರು ನಿಲ್ಲಿಸಿಕೊಂಡು ನಿಂತಿದ್ದರು. ಅವರ ಬಗ್ಗೆ ಸಂಶಯಗೊಂಡ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದರು. ದಾಳಿ ನಡೆಸಿ ಆರೋಪಿಗಳನ್ನು ಸೆರೆಹಿಡಿಯಲಾಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಕಾರಿನಲ್ಲೇ ಪಿಸ್ತೂಲ್ ಹಾಗೂ ಹಣ ಸಿಕ್ಕಿತ್ತು. ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ವೇತನ ನೀಡಲು ಹಣ ತಂದಿದ್ದಾಗಿ ಆರೋಪಿ ರಮೇಶ್ ಹೇಳಿದ್ದರು. ಅದಕ್ಕೆ ಯಾವುದೇ ದಾಖಲೆ ನೀಡಿರಲಿಲ್ಲ. ಪಿಸ್ತೂಲ್ ಸಹ ಸ್ನೇಹಿತನದ್ದು, ಆತನ ಬಳಿಯೇ ಪರವಾನಗಿ ಇರುವುದಾಗಿ ಆರೋಪಿ ಹೇಳಿದ್ದ. ಅದಕ್ಕೂ ಯಾವುದೇ ದಾಖಲೆ ಇರಲಿಲ್ಲ’ ಎಂದರು.
‘ಆರೋಪಿಗಳ ವಿರುದ್ಧ ಆರ್.ಎಂ.ಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳು ಚಾಲಕರಾಗಿದ್ದು, ರಮೇಶ್ ಜೊತೆ ಏಕೆ ಬಂದಿದ್ದರು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ’ ಎಂದು ಅಧಿಕಾರಿ ಹೇಳಿದರು.