ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊ ವಿಜ್ಞಾನಿಗಳ ಅಭಿನಂದಿಸಿದ ಪ್ರಧಾನಿ ಮೋದಿ: ಭಾಷಣದ ಪ್ರಮುಖಾಂಶಗಳು...

Published 26 ಆಗಸ್ಟ್ 2023, 5:40 IST
Last Updated 26 ಆಗಸ್ಟ್ 2023, 5:40 IST
ಅಕ್ಷರ ಗಾತ್ರ

ಬೆಂಗಳೂರು: ಗ್ರೀಸ್ ರಾಷ್ಟ್ರದ ಪ್ರವಾಸದಿಂದ ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಚಂದರಯಾನ-3ರ ಯಶಸ್ಸಿಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿಗಳನ್ನು ಅಭಿನಂದಿಸಿದರು.

ನಗರದ ಪೀಣ್ಯದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಕಮಾಂಡಿಂಗ್‌ ಸೆಂಟರ್‌ಗೆ ಭೇಟಿ ನೀಡಿ ಚಂದ್ರಯಾನ-3ರ ಯಶಸ್ಸಿಗಾಗಿ ವಿಜ್ಞಾನಿಗಳನ್ನು ಅಭಿನಂದಿಸಿ ಮಾತನಾಡಿದರು. 

ಭಾರತದ ತಿರಂಗಾ ಈಗ ಚಂದ್ರನನ್ನು ತಲುಪಿದೆ. ಈ ಸಾಧನೆಯನ್ನು ತಮ್ಮದೇ ಎಂಬಂತೆ ದೇಶದ ಜನರು ಸಂಭ್ರಮಿಸಿದ್ದಾರೆ. ಇಂತಹ ಕ್ಷಣಗಳನ್ನು ನಿರ್ಮಿಸಿದ ಇಸ್ರೊ ವಿಜ್ಞಾನಿಗಳು, ತಂತ್ರಜ್ಞರು, ಎಂಜಿನಿಯರ್‌ಗಳು ಸೇರಿದಂತೆ ಚಂದ್ರಯಾನ-3ಕ್ಕಾಗಿ ದುಡಿದ ಎಲ್ಲರಿಗೂ ಸಲ್ಯೂಟ್‌ ಮಾಡಲು ಬಯಸುತ್ತೇನೆ ಎಂದರು.

ಭಾಷಣದ ಪ್ರಮುಖಾಂಶಗಳು...

  • ಆಗಸ್ಟ್ 23ರ ಆ ಕ್ಷಣ ಭಾರತದ ಪಾಲಿಗೆ ಅವಿಸ್ಮರಣೀಯವಾದುದು. ಚಂದ್ರಯಾನ-3ರ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದ ಮೇಲಿಳಿದ ಆ ದಿನವನ್ನು ಇನ್ನು ಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಕಟಿಸಿದರು.

  • ಈ ಯಶಸ್ಸಿನ ನೆನಪಿಗಾಗಿ ಕೇಂದ್ರ ಸರ್ಕಾರದ ವೆಬ್‌ಸೈಟ್‌ನಲ್ಲಿ ರಾಷ್ಟ್ರ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್‌ 1ರಿಂದ ಸ್ಪರ್ಧೆ ಆರಂಭವಾಗಲಿದೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದರು.

  • ನಮ್ಮ ಚಂದ್ರಯಾನ-3ರ ಲ್ಯಾಂಡರ್‌ ಚಂದ್ರನನ್ನು ಸ್ಪರ್ಶಿಸಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್‌ ಎಂದು ನಾಮಕರಣ ಮಾಡಲು ಬಯಸುತ್ತೇನೆ. ಶಿವನಲ್ಲಿ ಮಾನವ ಕಲ್ಯಾಣದ ಸಂಕಲ್ಪ ಇದೆ. ಶಕ್ತಿಯಲ್ಲಿ ಆ ಸಂಕಲ್ಪವನ್ನು ಅನುಷ್ಠಾನಕ್ಕೆ ತರುವ ಬದ್ಧತೆಯನ್ನು ಕಾಣಬಹುದು. ಶಿವಶಕ್ತಿ ಪಾಯಿಂಟ್‌ ಭಾರತ ಮಾತ್ರವಲ್ಲ ಇಡೀ ಜಗತ್ತಿಗೆ ಪ್ರೇರಣೆಯ ಸ್ಥಳವಾಗಲಿದೆ. ಅದು ಹೊಸ ತಲೆಮಾರಿನ ಜನರಲ್ಲಿ ಬಾಹ್ಯಾಕಾಶ ವಿಜ್ಞಾನದ ಕುರಿತ ಅಧ್ಯಯನ ಮತ್ತು ಸಂಶೋಧನೆಗೆ ಪ್ರೇರಣೆ ನೀಡಲಿದೆ ಎಂದು ಮೋದಿ ಹೇಳಿದರು.

  • ಚಂದ್ರಯಾನ-2 ಪತನಗೊಂಡಿದ್ದ ಸ್ಥಳಕ್ಕೂ ನಾಮಕರಣ ಮಾಡಲು ಆಗಲೇ ನಿರ್ಧರಿಸಿದ್ದೆವು. ಆದರೆ, ಅದೊಂದು ನೋವಿನ ಸಂದರ್ಭವಾಗಿತ್ತು. ಈಗ ದೇಶದ ಎಲ್ಲ ಜನರ ಮನೆ, ಮನಗಳಲ್ಲಿ ತಿರಂಗಾ ಹಾರುತ್ತಿದೆ. ಈ ಸಂದರ್ಭದಲ್ಲಿ ಚಂದ್ರಯಾನ- 2 ಪತನಗೊಂಡಿದ್ದ ಸ್ಥಳವನ್ನು ತಿರಂಗಾ ಪಾಯಿಂಟ್‌ ಎಂದು ಹೆಸರಿಸುತ್ತೇವೆ. ಯಾವ ವೈಫಲ್ಯವೂ ಅಂತಿಮವಲ್ಲ. ಸಾಧನೆಯ ಹೊಸ ಹೆಜ್ಜೆ ಆರಂಭವಾಗುವುದು ವೈಫಲ್ಯದ ಸ್ಥಳದಿಂದಲೇ ಎಂಬುದನ್ನು ಸೂಚಿಸಲಿದೆ ಎಂದು ಪ್ರಧಾನಿ ತಿಳಿಸಿದರು.

  • ನೀವೆಲ್ಲರೂ ಅಭೂತಪೂರ್ವ ಸಾಧನೆ ಮಾಡಿದ್ದೀರಿ. ನಿಮ್ಮೆಲ್ಲರ ಕಠಿಣ ಪರಿಶ್ರಮ, ಬದ್ಧತೆ ಮತ್ತು ನಿರಂತರ ಪ್ರಯತ್ನದ ಫಲವಾಗಿ ಭಾರತವು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು.

  • ಈ ಸಾಧನೆಯ ನೆನಪಿನಲ್ಲಿ ಇಸ್ರೊ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜೀವನಮಟ್ಟ ಸುಧಾರಣೆ ಹಾಗೂ ಸುಲಲಿತ ಆಡಳಿತದಲ್ಲಿ ಬಾಹ್ಯಾಕಾಶ ವಿಜ್ಞಾನದ ಬಳಕೆ ಕುರಿತು ರಾಷ್ಟ್ರ ಮಟ್ಟದ ಹ್ಯಾಕಥಾನ್‌ ಆಯೋಜಿಸಬೇಕು. ಆರೋಗ್ಯ, ಶಿಕ್ಷಣ, ಟೆಲಿ ಮೆಡಿಸಿನ್‌, ಹವಾಮಾನ ಮುನ್ಸೂಚನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಬಳಕೆಗೆ ಇರುವ ಅವಕಾಶಗಳ ಕುರಿತು ಸಂಶೋಧನೆಗೆ ಯುವಜನರಿಗೆ ಪ್ರೇರಣೆ ನೀಡಲು ಈ ಹ್ಯಾಕಥಾನ್‌ ವೇದಿಕೆ ಆಗಬೇಕು ಎಂದು ಸಲಹೆ ನೀಡಿದರು.

  • ಭಾರತ ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದೆ. ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ 2,500 ನವೋದ್ಯಮಗಳು ಭಾರತದಲ್ಲಿವೆ. ಈ ಕ್ಷೇತ್ರದ ವಹಿವಾಟು 16 ಬಿಲಿಯನ್‌ ಡಾಲರ್‌ ತಲುಪಿದೆ. ಈ ಸಾಧನೆಯು 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ಕಾಣುವ ಗುರಿ ತಲುಪಲು ಕಾರಣವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT