ಬೆಂಗಳೂರು: ‘ಪಿ.ಎಂ ಸ್ವ-ನಿಧಿ’ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ವಿತರಿಸಲು ಬಿಬಿಎಂಪಿ ವತಿಯಿಂದ ಶನಿವಾರ ಏರ್ಪಡಿಸಿದ್ದ ವಿಶೇಷ ಶಿಬಿರಗಳಲ್ಲಿ ಒಟ್ಟು 1,520 ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಲಾಯಿತು.
ಬಿಬಿಎಂಪಿ ವ್ಯಾಪ್ತಿಯ ಎಂಟೂ ವಲಯಗಳಲ್ಲಿ ಹಾಗೂ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ ಶಿಬಿರಗಳಲ್ಲಿ 4,049 ಬೀದಿ ವ್ಯಾಪಾರಿಗಳು ಭಾಗವಹಿಸಿದರು. ಸಮರ್ಪಕ ದಾಖಲೆಗಳನ್ನು ಹೊಂದಿದ್ದ ಫಲಾನುಭವಿಗಳಿಗೆ ವಿವಿಧ ಬ್ಯಾಂಕ್ಗಳ ಅಧಿಕಾರಿಗಳು ಸ್ಥಳದಲ್ಲೇ ₹ 10 ಸಾವಿರ ಸಾಲ ಮಂಜೂರು ಮಾಡಿದರು.
ಶಿಬಿರದಲ್ಲಿ ಕೆನರಾ ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಕರ್ನಾಟಕ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಸಿಬ್ಬಂದಿ ಬೀದಿ ಬದಿ ವ್ಯಾಪಾರಿಗಳು ಸಾಲಕ್ಕೆ ಸಲ್ಲಿಸಿರುವ ದಾಖಲಾತಿಗಳನ್ನು ಪರಿಶೀಲಿಸಿದರು. ಮಂಜೂರಾತಿ ದೃಢೀಕರಣ ಪತ್ರವನ್ನು ನೀಡಿದ ನಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ಪಾವತಿಸಲಾಗುತ್ತದೆ.
ಬೀದಿ ವ್ಯಾಪಾರಿಗಳು ವರ್ಷದೊಳಗೆ ತಿಂಗಳ ಕಂತಿನಲ್ಲಿ ಪೂರ್ತಿ ಸಾಲ ಮರುಪಾವತಿ ಮಾಡಿದರೆ ಬಡ್ಡಿದರದಲ್ಲಿ ಶೇ 7ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಡಿಜಿಟಲ್ ವಹಿವಾಟಿನ ಮೇಲೆ ಪ್ರತಿ ತಿಂಗಳು ಕ್ಯಾಶ್ ಬ್ಯಾಕ್ ನೀಡಲಾಗುತ್ತದೆ. ಅವಧಿಯೊಳಗೆ ಸಾಲಮರುಪಾವತಿ ಮಾಡಿದವರು ₹ 20 ಸಾವಿರ ಸಾಲ ಪಡೆಯಲು ಅರ್ಹತೆ ಗಳಿಸುತ್ತಾರೆ.
ಮಾರ್ಚ್ 6 ಮತ್ತು 13 ರಂದು ಕೂಡಾ ಶಿಬಿರ ಆಯೋಜಿಸಿದ್ದು, ಬೀದಿ ಬದಿ ವ್ಯಾಪಾರಿಗಳು ಅದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಬಿಬಿಎಂಪಿ ತಿಳಿಸಿದೆ.
ಶಿಬಿರದಲ್ಲಿ ಬಿಬಿಎಂಪಿಯ ವಿಶೇಷ ಆಯುಕ್ತ (ಕಲ್ಯಾಣ) ರವೀಂದ್ರ, ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸೆಲ್ವಕುಮಾರ್, ರಾಷ್ಟ್ರೀಯ ಅಭಿಯಾನಬದ ವ್ಯವಸ್ಥಾಪಕ ಅನುಶ್ ಕುಮಾರ್, ಬೆಂಗಳೂರು ನಗರ ಜಿಲ್ಲೆಯ ಲೀಡ್ ಬ್ಯಾಂಕ್ನ ವ್ಯವಸ್ಥಾಪಕ ಸುಬ್ಬಾ ನಾಯಕ್ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದರು.
ಕಿರು ಸಾಲ ಮಂಜೂರಾತಿ ವಿವರ
ಸ್ಥಳ; ಹಾಜರಾದವರು; ಸಾಲ ಮಂಜೂರಾದವರ ಸಂಖ್ಯೆ
ಬಿಬಿಎಂಪಿ ಕೇಂದ್ರ ಕಚೇರಿ; 250; 162
ಪೂರ್ವ ವಲಯ; 815; 321
ಪಶ್ಚಿಮ ವಲಯ; 450; 183
ದಕ್ಷಿಣ ವಲಯ; 618; 276
ಆರ್.ಆರ್ನಗರ ವಲಯ; 387; 145
ದಾಸರಹಳ್ಳಿ ವಲಯ; 130; 66
ಬೊಮ್ಮನಹಳ್ಳಿ ವಲಯ; 485; 191
ಮಹದೇವಪುರ ವಲಯ; 725; 22
ಯಲಹಂಕ ವಲಯ; 189; 154
ಮಾಹಿತಿಗೆ: https://pmsvanidhi.mohua.gov.in/Home/Schemes
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.