ಬೆಂಗಳೂರು: ‘ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಸರ್ಕಾರವು ಈಗಾಗಲೇ ಅನೇಕ ಹೆಜ್ಜೆಗಳನ್ನು ಇಟ್ಟಿದೆ. ರಾಜ್ಯದ ಶೈಕ್ಷಣಿಕ ವಲಯದಲ್ಲಿ ದೊಡ್ಡ ಸುಧಾರಣಾ ಪರ್ವವೇ ಆರಂಭವಾಗಿದೆ’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಡಾ. ದ.ರಾ. ಬೇಂದ್ರೆಯವರ ಜಯಂತ್ಯುತ್ಸವ ಅಂಗವಾಗಿ ವಿ. ಸೋಮಣ್ಣ ಪ್ರತಿಷ್ಠಾನ ವತಿಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ‘ಉತ್ತಮ ಸಮಾಜದ ಜತೆಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಧ್ಯ' ಎಂದರು.
‘ಶಿಕ್ಷಣವನ್ನು ಕೇವಲ ಅಕಾಡೆಮಿಕ್ ದೃಷ್ಟಿಯಿಂದ ಕಲಿಯುವುದಲ್ಲ. ಅದು ಎಲ್ಲ ಹಂತಗಳಲ್ಲೂ ದೇಶಕ್ಕೆ ಪೂರಕವಾಗಿರಬೇಕು. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಇನ್ನಾವುದೇ ಉದ್ದೇಶವಿದ್ದರೂ ಅಂತಿಮವಾಗಿ ನಮ್ಮ ಕಲಿಕೆಯು ಸಮಾಜಕ್ಕೆ ಅರ್ಪಣೆಯಾಗಬೇಕು. ಈ ನಿಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರವನ್ನು ಮರು ನಿರ್ಮಾಣ ಮಾಡಲಾಗುತ್ತಿದೆ’ ಎಂದರು.
ವಸತಿ ಸಚಿವ ವಿ. ಸೋಮಣ್ಣ, ‘ಯಾವುದೇ ಕಾರ್ಯದಲ್ಲಿ ಸರ್ಕಾರದ ಜೊತೆಗೆ ಖಾಸಗಿಯವರ ಸಹಕಾರವೂ ಇದ್ದರೆ ಅಭಿವೃದ್ಧಿ ಸಾಧ್ಯ’ ಎಂದರು.
ದ.ರಾ.ಬೇಂದ್ರೆ ಅವರ ಬಗ್ಗೆ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಸೊಗಡು ಶಿವಣ್ಣ, ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ ಸೋಮಣ್ಣ, ಕಾರ್ಯಾಧ್ಯಕ್ಷ ಡಾ.ಅರುಣ್ ಸೋಮಣ್ಣ, ಕೋಶಾಧ್ಯಕ್ಷ ನವೀನ್ ಸೋಮಣ್ಣ, ಕಾಸಿಯಾ ಕಾರ್ಯದರ್ಶಿ ಜಗದೀಶ್ ಪಾಲ್ಗೊಂಡಿದ್ದರು.
2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ, ಬಿಬಿಎಂಪಿ ಪ್ರೌಢಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.