ಬೆಂಗಳೂರು: ಅಂಗನವಾಡಿ ಮತ್ತು ಮಕ್ಕಳ ಹಬ್ಬ, ಬೇಟಿ ಬಚಾವೋ ಬೇಟಿ ಪಡಾವೊ ಯೋಜನೆಯನ್ನು ಅನುಷ್ಠಾನ ಮಾಡುವ ಮೂಲಕ ಅಂಗನವಾಡಿಗಳ ಬಲವರ್ಧನೆಗೊಳಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್. ಕಾಂತರಾಜ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯಿತಿ, ಮಕ್ಕಳ ಜಾಗೃತಿ ಸಂಸ್ಥೆ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಮಾನಸಿಕ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯಲ್ಲಿ ಅಂಗನವಾಡಿಗಳ ಪಾತ್ರ ಮಹತ್ವದ್ದಾಗಿದೆ. ನಗರ ಜಿಲ್ಲೆಯ 249 ಅಂಗನವಾಡಿ ಕೇಂದ್ರಗಳನ್ನು ಬಲಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್. ಸಿದ್ದರಾಮಮಣ್ಣ, ಐಟಿಸಿ ಕಂಪನಿಯ ಹರೀಶ್, ಕರಿಯಪ್ಪ, ಮಕ್ಕಳ ಜಾಗೃತಿ ಸಂಸ್ಥೆಯ ಸಿಇಒ ಸುನೈನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್, ಕಾರ್ಯಕ್ರಮ ಅಧಿಕಾರಿ ಅಶ್ವಿನಿ ಉಪಸ್ಥಿತರಿದ್ದರು.
ವಿವಿಧ ಅಂಗನವಾಡಿಗಳ ಕಾರ್ಯಕರ್ತೆಯರು ಮತ್ತು ಸಹಾಯಕರು ಮಳಿಗೆಗಳನ್ನು ಹಾಕಿ ಜಾಗೃತಿಯ ಫಲಕಗಳನ್ನು ಪ್ರದರ್ಶಿಸಿ, ಪೌಷ್ಟಿಕ ಆಹಾರ ಸಹಿತ ವಿವಿಧ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಿದರು.