ಬೆಂಗಳೂರು: ‘ತಮ್ಮ ಆಸ್ತಿ ಹಾಗೂ ಸಾಲದ ವಿವರಗಳನ್ನು ನೀಡದ ಬಿಬಿಎಂಪಿ ಸದಸ್ಯರ ಸದಸ್ಯತ್ವ ರದ್ದು ಗೊಳಿಸಲಾಗುವುದು’ ಎಂದು ಹೈಕೋರ್ಟ್ ಮೌಖಿಕ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಕೆ. ಅನಿಲ್ ಕುಮಾರ್ ಶೆಟ್ಟಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅಜರ್ ಮೀರ್, ವಿವರ ಸಲ್ಲಿಸದೇ ಇರುವ ಪಾಲಿಕೆ ಸದಸ್ಯರ ಕುರಿತಂತೆ ನ್ಯಾಯಪೀಠಕ್ಕೆ ಆಕ್ಷೇಪಣೆ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಸದಸ್ಯರ ಈ ನಡೆ ಕಾನೂನು ಬಾಹಿರ. ಒಂದು ವಾರದೊಳಗೆ ಬಿಬಿಎಂಪಿ ಪರ ವಕೀಲರು ಇದಕ್ಕೆ ಸೂಕ್ತ ವಿವರಣೆ ನೀಡಬೇಕು. ಇಲ್ಲವಾದಲ್ಲಿ ತೀರ್ಪು ಪ್ರಕಟಿಸಲಾಗುವುದು’ ಎಂದು ವಿಚಾರಣೆ ಮುಂದೂಡಿದೆ.
ಪ್ರಕರಣವೇನು?: ‘34 ಪಾಲಿಕೆ ಸದಸ್ಯರು ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಆಸ್ತಿ ಹಾಗೂ ಸಾಲದ ವಿವರಗಳನ್ನು ಮೇಯರ್ಗೆ ಒದಗಿಸಿಲ್ಲ. ಆಸ್ತಿ ವಿವರ ಸಲ್ಲಿಸದ ಸದಸ್ಯರನ್ನು ಅವರ ಸ್ಥಾನದಲ್ಲಿ ಮುಂದುವರಿಸದಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಬಿಬಿಎಂಪಿ ಪ್ರಾದೇಶಿಕ ಆಯುಕ್ತರು ಪರಿಗಣಿಸಿಲ್ಲ' ಎಂಬುದು ಅರ್ಜಿದಾರರ ಆಕ್ಷೇಪಣೆ.