ಬೆಂಗಳೂರು: ‘ಕೋವಿಡ್ನಿಂದ ಸಾವಿರಾರು ಜನ ಮೃತಪಟ್ಟಿದ್ದಾರೆ. ಅವರ ನೆರವಿಗೆ ಕೇಂದ್ರ ಮತ್ತು ರಾಜ್ಯಸರ್ಕಾರ ಧಾವಿಸುತ್ತಿಲ್ಲ. ಬದಲಾಗಿ ಬಿಜೆಪಿಯು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಜನರನ್ನು ವಂಚಿಸುತ್ತಿದೆ’ ಎಂದು ಸಂಸದ ಡಿ.ಕೆ. ಸುರೇಶ್ ದೂರಿದರು.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಪೇಗೌಡ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮೂರುಸಾವಿರ ಕುಟುಂಬಗಳಿಗೆ ನೀಡಿದ ದಿನಸಿ ಕಿಟ್ಗಳನ್ನು ವಿತರಿಸಿ ಮಾತನಾಡಿದರು.
‘ಯುಪಿಎ ಸರ್ಕಾರವಿದ್ದಾಗ ಡಾ. ಮನಮೋಹನ್ ಸಿಂಗ್ ಅವರು ರಾಷ್ಟ್ರೀಯ ವಿಪತ್ತು ಯೋಜನೆಯಲ್ಲಿ ತಲಾ ₹4ಲಕ್ಷ ನೀಡಲು ಹಣವಿಟ್ಟಿದ್ದರು. ನರೇಂದ್ರ ಮೋದಿ ಅವರು ಆ ಹಣವನ್ನು ಕೊಡದೆ ಸತಾಯಿಸುತ್ತಿದ್ದರು. ನ್ಯಾಯಾಲಯ ಮಧ್ಯ ಪ್ರವೇಶಿಸಿ, ಮೃತರ ಕುಟುಂಬಕ್ಕೆ ತಲಾ ₹1ಲಕ್ಷ ಕೊಡುವಂತೆ ಆದೇಶ ನೀಡಿದೆ. ಆದರೆ, ಈವರೆಗೂ ಆ ಹಣವೂ ಸಂದಾಯವಾಗಿಲ್ಲ’ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕಿ ಕುಸುಮಾ, ‘ಸಂಕಷ್ಟದ ಸಂದರ್ಭದಲ್ಲಿದ್ದ ಜನಸಾಮಾನ್ಯರು, ಬಡವರು, ನೊಂದವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಸಾವಿರಾರು ಕುಟುಂಬಗಳಿಗೆ ದಿನಸಿ ಕಿಟ್, ಔಷಧಿ ವಿತರಿಸಲಾಗಿದೆ’ ಎಂದರು.
ಮುಖಂಡ ಹನುಮಂತರಾಯಪ್ಪ, ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಕೆ.ಆರ್.ಪಾರ್ಥಗೌಡ, ಹನುಮೇಗೌಡ, ಎ. ಅಮರನಾಥ್, ಕೃಷ್ಣ, ಭಾಗ್ಯಮ್ಮ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.