ಬೆಂಗಳೂರು: ನಗರದಲ್ಲಿ ರೈಲ್ವೆ ಅಂಡರ್ ಪಾಸ್ಗಳ ಮೂಲಕ ಹಾದು ಹೋಗುವ ದ್ವಿಚಕ್ರ ವಾಹನಗಳ ಸವಾರರು, ಪಾದಚಾರಿಗಳ ಮೇಲೆ ರೈಲುಗಳ ಶೌಚಾಲಯಗಳಿಂದ ಮಲಿನ ನೀರು ಬೀಳುವುದನ್ನು ತಪ್ಪಿಸಲು ರೈಲ್ವೆ ಇಲಾಖೆ ಕ್ರಮಕೈಗೊಂಡಿದೆ. ಹಳಿಗಳ ಕೆಳಗೆ 4.4 ಮೀ ಅಗಲದ ಶೀಟ್ ಅಳವಡಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಕೆ.ಎಸ್.ಆರ್. ರೈಲು ನಿಲ್ದಾಣ ಸಮೀಪದ ಕೃಷ್ಣ ಫ್ಲೋರ್ ಮಿಲ್ ಬಳಿಯ ಮೆಜೆಸ್ಟಿಕ್ ರಸ್ತೆಯ ಸೇತುವೆಯಲ್ಲಿ ರೈಲು ಹಳಿಗಳ ಕೆಳಗೆ ಇದ್ದ 3.2 ಮೀಟರ್ ಅಗಲದ ಶೀಟ್ಗಳನ್ನು ಬದಲಿಸಲಾಗಿದೆ. ಶೇಷಾದ್ರಿಪುರ ರಸ್ತೆಯ ಅಂಡರ್ ಪಾಸ್ನಲ್ಲಿಯೂ ಈಗಾಗಲೇ ಶೀಟ್ ಬದಲಿಸ ಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಬೈಯ್ಯಪ್ಪನಹಳ್ಳಿ ಸಮೀಪದ ಜೀವನಹಳ್ಳಿ ಸೇತುವೆ, ನಾಗವಾರಕ್ಕೆ ಸಂಪರ್ಕಿಸುವ ಟ್ಯಾನರಿ ರಸ್ತೆಯಲ್ಲಿನ ಸೇತುವೆ, ಮಿಲ್ಲರ್ ರಸ್ತೆ, ಅರಮನೆ ರಸ್ತೆ, ವಿಂಡ್ಸರ್ ಮ್ಯಾನರ್, ಬಿನ್ನಿಮಿಲ್ ಬಳಿಯ ರೈಲ್ವೆ ಅಂಡರ್ ಪಾಸ್ಗಳಲ್ಲಿ ಶೀಟ್ ಬದಲಾವಣೆ ಕಾಮಗಾರಿ ಆರಂಭಿಸಲಾಗಿದೆ ಎಂದು ಹೇಳಿದೆ.
ಶೌಚಾಲಯಗಳ ಮಲಿನ ನೀರು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರ ಮೇಲೆ ಬೀಳುವುದನ್ನು ತಪ್ಪಿಸುವಂತೆ ಮೇಯರ್ ಗಂಗಾಂಬಿಕೆ ಅವರು ರೈಲ್ವೆ ಸಚಿವ ಸುರೇಶ್ ಅಂಗಡಿ ಅವರಿಗೆ ಕಾರ್ಯಕ್ರಮವೊಂದರಲ್ಲಿ ಜೂನ್ 29ರಂದು ಮನವಿ ಮಾಡಿದ್ದರು. ಶೌಚ ನೀರು ಜನರ ಮೇಲೆ ಬೀಳದಂತೆ ಕ್ರಮ ಕೈಗೊಂಡು ಒಂದು ತಿಂಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದರು.