ಬೆಂಗಳೂರು: ನಗರದ ಹಲವೆಡೆ ಗುರುವಾರ ಜಿಟಿ ಜಿಟಿ ಮಳೆಯಾಗಿ ತಂಪೆರೆಯಿತು.
ಬೆಳಿಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಕೆಲ ನಿಮಿಷ ಬಿಸಿಲು ಇತ್ತು. ನಂತರ, ಪುನಃ ಮೋಡ ಕವಿದು ಜಿಟಿ ಜಿಟಿ ಮಳೆ ಬರಲಾರಂಭಿಸಿತು.
ರಾಜಾಜಿನಗರ, ಮಲ್ಲೇಶ್ವರ, ವಿಜಯನಗರ, ಯಶವಂತಪುರ, ಪೀಣ್ಯ, ಇಂದಿರಾನಗರ, ಹೂಡಿ, ಮಾರತ್ತಹಳ್ಳಿ, ವೈಟ್ಫೀಲ್ಡ್, ಕೋರಮಂಗಲ, ಮಡಿವಾಳ, ಬೊಮ್ಮನಹಳ್ಳಿ, ಜಯನಗರ, ಎಚ್ಎಸ್ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಬನಶಂಕರಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆಯಾಯಿತು.
ಅಂಥ ಮಳೆಯಲ್ಲೇ ಸವಾರರು ವಾಹನಗಳನ್ನು ಓಡಿಸಿಕೊಂಡು ಹೋದರು. ಕೆಲ ಪಾದಚಾರಿಗಳು ಮಳೆಯಲ್ಲಿ ನಡೆದುಕೊಂಡು ಹೋದರು. ಮಲ್ಲೇಶ್ವರ, ಓಕಳಿಪುರ, ಮೈಸೂರು ರಸ್ತೆ ಹಾಗೂ ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಕಂಡುಬಂತು.
‘ಹೇಳಿಕೊಳ್ಳುವಂಥ ಮಳೆ ಸುರಿದಿಲ್ಲ. ಎಲ್ಲಿಯೂ ಹಾನಿ ಆದ ಬಗ್ಗೆ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.