ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆ ಕರೆದೊಯ್ದು ಅತ್ಯಾಚಾರ: ಮಹಡಿಯಿಂದ ತಳ್ಳಿ ಕೊಲೆ

Published 1 ಮಾರ್ಚ್ 2024, 23:56 IST
Last Updated 1 ಮಾರ್ಚ್ 2024, 23:56 IST
ಅಕ್ಷರ ಗಾತ್ರ

ಬೆಂಗಳೂರು: ಹಣದ ಆಮಿಷವೊಡ್ಡಿ ಮಹಿಳೆಯೊಬ್ಬರನ್ನು ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪದಡಿ ಮುಬಾರಕ್‌ನನ್ನು (38) ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಅಂಜನಪ್ಪ ಗಾರ್ಡನ್‌ನ ಮುಬಾರಕ್, ಆಟೊ ಚಾಲಕ. ಫೆ.19ರಂದು ತಡರಾತ್ರಿ ಮಹಿಳೆಯನ್ನು ಕೊಂದು ಸಾಕ್ಷ್ಯ ನಾಶ ಮಾಡಿ ತಲೆಮರೆಸಿಕೊಂಡಿದ್ದ ಈತನನ್ನು ಇತ್ತೀಚೆಗೆ ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಸಿಟಿ ಮಾರುಕಟ್ಟೆಯಲ್ಲಿ ಪರಿಚಯ: ‘ಆರೋಪಿ ಮುಬಾರಕ್ ರಾತ್ರಿ 12 ಗಂಟೆ ಸುಮಾರಿಗೆ ತನ್ನ ಆಟೊದಲ್ಲಿ ಸಿಟಿ ಮಾರುಕಟ್ಟೆ ಬಳಿ ಹೋಗಿದ್ದ. ಅಲ್ಲಿಯೇ ಈತನಿಗೆ ಮಹಿಳೆ ಪರಿಚಯವಾಗಿತ್ತು. ಹಣ ನೀಡುವುದಾಗಿ ಹೇಳಿದ್ದ ಆರೋಪಿ, ಮಹಿಳೆಯನ್ನು ಆಟೊದಲ್ಲಿ ಹತ್ತಿಸಿಕೊಂಡು ಸ್ಥಳದಿಂದ ಹೊರಟಿದ್ದ’ ಎಂದು ಅಧಿಕಾರಿ ತಿಳಿಸಿದರು.

‘ನಿರ್ಮಾಣ ಹಂತದ ಕಟ್ಟಡವೊಂದಕ್ಕೆ ಮಹಿಳೆಯನ್ನು ಕರೆದೊಯ್ದಿದ್ದ ಆರೋಪಿ, ಅವರ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ, ಇಬ್ಬರ ನಡುವೆ ಗಲಾಟೆ ಶುರುವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು’ ಎಂದು ಹೇಳಿದರು.

ಕಟ್ಟಡದಿಂದ ತಳ್ಳಿ ಕೊಲೆ: ‘ಅತ್ಯಾಚಾರದ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡುವುದಾಗಿ ಮಹಿಳೆ ಹೇಳಿದ್ದರು. ಇದರಿಂದ ಹೆದರಿದ್ದ ಆರೋಪಿ ಮುಬಾರಕ್, ಮಹಿಳೆಯನ್ನು ಮೊದಲ ಮಹಡಿಯಿಂದ ತಳ್ಳಿ ಕೊಂದಿದ್ದ. ನಂತರ ಸ್ಥಳದಿಂದ ಪರಾರಿಯಾಗಿದ್ದ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ಫೆ.20ರಂದು ಬೆಳಿಗ್ಗೆ ಮೃತದೇಹ ನೋಡಿದ್ದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ, ಕಟ್ಟಡದಿಂದ ಬಿದ್ದು ಮಹಿಳೆ ಮೃತಪಟ್ಟಿರಬಹುದೆಂದು ಊಹಿಸಲಾಗಿತ್ತು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿತ್ತು’ ಎಂದು ಹೇಳಿದರು.

ವೈದ್ಯರ ವರದಿ ಸುಳಿವು: ‘ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು, ಮಹಿಳೆ ಮೇಲೆ ಅತ್ಯಾಚಾರ ನಡೆದಿರುವುದಾಗಿ ಹೇಳಿದ್ದರು. ಇದೇ ಸುಳಿವು ಆಧರಿಸಿ ಘಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಲಾಗಿತ್ತು. ಆಗಲೇ ಆಟೊ ನೋಂದಣಿ ಸಂಖ್ಯೆ ಪತ್ತೆಯಾಗಿತ್ತು. ಚಾಲಕನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಪ್ಪೊಪ್ಪಿಕೊಂಡ’ ಎಂದು ಅಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT