ಬೆಂಗಳೂರು:ನದಿ ಮೂಲ ಸಂರಕ್ಷಣಾ ಯೋಜನೆ, ಬಯಲು ಸೀಮೆ ವನವಿಕಾಸ ಯೋಜನೆ, ಕರಾವಳಿ ಹಸಿರು ಕವಚ ಯೋಜನೆಗಳಂತಹ ಹಲವು ವಿನೂತನ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಕುರಿತುಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಗುರುವಾರ ಇಲ್ಲಿ ಭೇಟಿ ಮಾಡಿದ ಅಶೀಸರ ನೇತೃತ್ವದ ನಿಯೋಗ,2020-21ನೇ ಸಾಲಿನ ಬಜೆಟ್ನಲ್ಲಿ ನಾಡಿನ ಜನತೆಯ ಗಮನ ಸೆಳೆಯಬಹುದಾದ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್ ಸೊಪ್ಪಿನ ಬೆಟ್ಟ ಪ್ರದೇಶವಿದ್ದು, ರೈತರ ಸಹಭಾಗಿತ್ವ ದಲ್ಲಿ 5 ಸಾವಿರ ಹೆಕ್ಟೇರ್ ಸೊಪ್ಪಿನ ಬೆಟ್ಟ ಅಭಿವೃದ್ಧಿ ಯೋಜನೆ ಸೇರ್ಪಡೆಗೊಳಿಸ ಬೇಕು, ದೇವರಕಾಡು–ಕಾನು ಅಭಿ ವೃದ್ಧಿ ಯೋಜನೆ ಪುನಃ ಜಾರಿಗೆ ತರಬೇಕು, ಬಿದಿರು ಬಂಗಾರ ಯೋಜನೆ, ಔಷಧಿ ಸಸ್ಯಗಲ ಬೆಳೆಸುವ ಯೋಜನೆ ಆರಂಭಿ ಸಬೇಕು ಎಂದು ಒತ್ತಾಯಿಸಲಾಯಿತು.
ರೈತರಿಗೆ ಸೋಲಾರ್ ಯೋಜನೆ ಜಾರಿಗೆ ತಂದು, ಶೇ 50ರಷ್ಟು ಸಬ್ಸಿಡಿ ನೀಡಬೇಕು, ಹಿತ್ತಿಲ ಹೊನ್ನು ಯೋಜನೆ ಮೂಲಕ ಮಹಿಳೆಯರಿಗೆ ಪ್ರೋತ್ಸಾಹ ನೀಡಬೇಕು. ರಾಜ್ಯದ 36 ಸಾವಿರ ಕೆರೆಗಳ ಪೈಕಿ ಪ್ರತಿ ಜಿಲ್ಲೆಯಲ್ಲಿ 100 ಕೆರೆಗಳನ್ನು ಪುನಶ್ಚೇತನಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಜೈವಿಕ ಇಂಧನ ತಜ್ಞ ವೈ.ಬಿ.ರಾಮಕೃಷ್ಣ,ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ,ಪರಿಸರ ತಜ್ಞ ಡಾ.ಕೇಶವ ಕೋರ್ಸೆ, ‘ವೃಕ್ಷಲಕ್ಷ’ ಸಂಚಾಲಕ ಬಿ.ಎಚ್. ರಾಘವೇಂದ್ರ,ಕಾನೂನು ತಜ್ಞ ಡಾ.ಎಂ.ಕೆ. ರಮೇಶ್,ತೋಟಗಾರಿಕಾ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಎಸ್.ಬಿ. ದಂಡಿನ್ ಇದ್ದರು.