ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಕ್ಯಾಬ್ ಚಾಲಕರನ್ನು ಸುಲಿಗೆ ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಆರ್.ಎಂ.ಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಅಭಿಷೇಕ್, ರೋಹಿತ್, ಅಜಯ್ ಹಾಗೂ ಮಣಿಕಂಠ ಬಂಧಿತರು. ಬಾಲ್ಯ ಸ್ನೇಹಿತರಾಗಿದ್ದ ಆರೋಪಿಗಳು, ದುಶ್ಚಟಗಳ ದಾಸರಾಗಿದ್ದರು. ಅಕ್ರಮವಾಗಿ ಹಣ ಸಂಪಾದಿಸಲು ಸುಲಿಗೆ ಮಾಡಲಾರಂಭಿಸಿದ್ದರು. ಅವರಿಂದ ₹18,000 ನಗದು ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ನ. 4ರಂದು ಚಾಲಕ ಪ್ರವೀಣ್ ಎಂಬುವರ ಕ್ಯಾಬ್ ಕಾಯ್ದಿರಿಸಿದ್ದ ಆರೋಪಿಗಳು, ಸಿಂಗಾಪುರ ಲೇಔಟ್ಗೆ ಹೋಗಬೇಕೆಂದು ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಚಾಲಕನಿಗೆ ಡ್ರ್ಯಾಗರ್ ತೋರಿಸಿ ಕೊಲೆ ಬೆದರಿಕೆಯೊಡ್ಡಿದ್ದರು. ಚಾಲಕನ ಬಳಿ ಇದ್ದ ₹ 2,500 ನಗದು ಹಾಗೂ ಮೊಬೈಲ್ ಸುಲಿಗೆ ಮಾಡಿದ್ದರು. ಎಟಿಎಂ ಕಾರ್ಡ್ನಿಂದ ಹಣವನ್ನೂ ಡ್ರಾ ಮಾಡಿಸಿಕೊಂಡು ಪರಾರಿಯಾಗಿದ್ದರು.’
‘ಚಾಲಕ ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಕಾಡುಗೋಡಿ, ಅನ್ನಪೂರ್ಣೇಶ್ವರಿ ನಗರ ಹಾಗೂ ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಕೃತ್ಯ ಎಸಗಿರುವ ಮಾಹಿತಿ ಇದೆ' ಎಂದೂ ಪೊಲೀಸರು ತಿಳಿಸಿದರು.