ಬೆಂಗಳೂರು: ಎದುರಾಳಿಯನ್ನು ಹತ್ಯೆ ಮಾಡಿ ಸುಲಿಗೆ ಮಾಡಲು ಸಂಚು ರೂಪಿಸಿದ್ದ ಆರೋಪದಡಿ ರೌಡಿ ರೋಹಿತ್ ಅಲಿಯಾಸ್ ಕಾಡುಬಿಸನಹಳ್ಳಿ ರೋಹಿತ್ಗೌಡ (29) ಹಾಗೂ ಆತನ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ಕಾಡುಬಿಸನಹಳ್ಳಿಯ ರೌಡಿ ಸೋಮನನ್ನು ಹತ್ಯೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಬಂಧಿತ ಆರೋಪಿಗಳಿಂದ ಪಿಸ್ತೂಲ್, ಜೀವಂತ ಗುಂಡು, 10 ಮಚ್ಚುಗಳು ಹಾಗೂ 2 ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.
ಎರಡು ವರ್ಷಗಳ ದ್ವೇಷ: ‘ರೌಡಿ ರೋಹಿತ್ನ ಅಣ್ಣನನ್ನು 2018ರಲ್ಲಿ ಕೊಲೆ ಮಾಡಲಾಗಿತ್ತು. ಇದರಲ್ಲಿ ರೌಡಿ ಸೋಮನ ಹೆಸರು ಕೇಳಿಬಂದಿತ್ತು. ಮರು ವರ್ಷವೇ ಸೋಮನ ತಮ್ಮ ಮಂಜನ ಕೊಲೆಯಾಗಿತ್ತು. ಅದರಲ್ಲಿ ರೋಹಿತ್ ಹೆಸರು ಕೇಳಿಬಂದಿತ್ತು’ ಎಂದು ಪೊಲೀಸರು ತಿಳಿಸಿದರು.
‘ಸೋಮ ಹಾಗೂ ರೋಹಿತ್ ನಡುವೆ ಎರಡು ವರ್ಷಗಳಿಂದ ಗಲಾಟೆ ನಡೆಯುತ್ತಿತ್ತು. ಒಬ್ಬರಿಗೊಬ್ಬರು ಹತ್ಯೆ ಮಾಡಲು ತೆರೆಮರೆಯಲ್ಲಿ ಸಂಚು ರೂಪಿಸುತ್ತಲೇ ಇದ್ದರು’ ಎಂದರು.
‘ಗುರುವಾರ ಬೆಳಿಗ್ಗೆ ಬಾಗಲಗುಂಟೆ ಠಾಣೆ ವ್ಯಾಪ್ತಿಯ ಮಲ್ಲಸಂದ್ರದಿಂದ ರವೀಂದ್ರನಗರದತ್ತ ಹೋಗುವ ರಸ್ತೆಯಲ್ಲಿ ಆರೋಪಿಗಳು ನಿಂತಿದ್ದರು. ಅದೇ ರಸ್ತೆಯಲ್ಲೇ ಸೋಮ ಬರುವುದನ್ನು ಕಾಯುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದೂ ತಿಳಿಸಿದರು.