ಬೆಂಗಳೂರು: ‘ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಸರ್ಕಾರದ ವತಿಯಿಂದ ವಿಶೇಷ ಪ್ರೋತ್ಸಾಹ ಸಿಗುವಂತೆ ಮಾಡಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಇಲ್ಲಿನ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್ಐ) ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಒಂದು ವೈದ್ಯಕೀಯ ಕಾಲೇಜು ತೆರೆಯುವ ಆಸಕ್ತಿಯನ್ನು ಹೊಂದಿದೆ’ ಎಂದು ತಿಳಿಸಿದರು.
‘ಕೇವಲ ಹಣ ಸಂಪಾದನೆಗೆಂದು ನಮ್ಮ ವೃತ್ತಿಯನ್ನು ಮೀಸಲಿಡಬಾರದು. ವೈದ್ಯರು ರೋಗಿಗಳ ವಿಶ್ವಾಸ ಗಳಿಸಬೇಕು. ಮಾನವೀಯ ಮೌಲ್ಯ ಅರ್ಥೈಸಿಕೊಂಡು ವೃತ್ತಿ ನಿರ್ವಹಿಸಬೇಕು’ ಎಂದರು.