ಬೆಂಗಳೂರು: ರಾಜ್ಯದಲ್ಲಿ ಗುಜರಿ ನೀತಿ ಅಡಿಯಲ್ಲಿ ಶೀಘ್ರ ‘ನೋಂದಾಯಿತ ವಾಹನಗಳ ಗುಜರಿ ಸೌಲಭ್ಯ ಕೇಂದ್ರ’(ಆರ್ವಿಎಸ್ಎಫ್) ಸ್ಥಾಪನೆಯಾಗಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದಲ್ಲಿ ಮೊದಲ ಆರ್ವಿಎಸ್ಎಫ್ ಸ್ಥಾಪನೆಯಾಗಲಿದೆ. ಇದು ವಾಹನಗಳನ್ನು ಗುಜರಿಗೆ ಹಾಕುವ ಕೇಂದ್ರವಾಗಲಿದೆ.
ಹಳೆಯ ವಾಹನಗಳನ್ನು ನಾಶಪಡಿಸುವ ನೀತಿಯ ಅಡಿಯಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಗುಜರಿಗೆ ಹಾಕಿದ ವಾಹನಗಳನ್ನು ಪರಿಸರ ಸ್ನೇಹಿ ವಾತಾವರಣದಲ್ಲಿ ಮರುಬಳಕೆಗೆ ಅನುಕೂಲವಾಗುವಂತೆ ರೂಪಿಸುವುದು ಮತ್ತು ಹಾನಿಕಾರಕ ವಸ್ತುಗಳನ್ನು ವಿಲೇವಾರಿ ಮಾಡಲು ಯೋಜನೆ ರೂಪಿಸಲಾಗಿದೆ.
ಕೇಂದ್ರ ಸರ್ಕಾರ ಸ್ವಾಮ್ಯದ ಎಂಎಸ್ಟಿಸಿ ಮತ್ತು ಮಹಿಂದ್ರಾ ಅಕ್ಸೆಲೊ ಜಂಟಿ ಸಹಭಾಗಿತ್ವದ ‘ಮಹಿಂದ್ರಾ ಸೆರೊ’ ಈ ಸೌಲಭ್ಯವನ್ನು ಸ್ಥಾಪಿಸಲಿದೆ.
ಗುಜರಿ ನೀತಿ ಅಡಿಯಲ್ಲಿ 64 ಆರ್ವಿಎಸ್ಎಫ್ ಕೇಂದ್ರಗಳನ್ನು ದೇಶದಾದ್ಯಂತ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ತಡವಾಗಿ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ರಾಜ್ಯದಲ್ಲಿ ಮೂರು ಆರ್ವಿಎಸ್ಎಫ್ಗಳನ್ನು ಈ ವರ್ಷ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇತರ ಎರಡು ಕೇಂದ್ರಗಳು ತುಮಕೂರು ಜಿಲ್ಲೆಯ ಕೊರಟಗೆರೆ ಮತ್ತು ಕೊಪ್ಪಳದಲ್ಲಿ ಸ್ಥಾಪನೆಯಾಗಲಿವೆ. ಆರ್ಸಿ (ನೋಂದಣಿ ಪ್ರಮಾಣಪತ್ರ) ಮತ್ತು ಎಫ್ಸಿ(ಫಿಟ್ನೆಸ್ ಪ್ರಮಾಣಪತ್ರ) ನವೀಕರಿಸದ 15 ವರ್ಷಗಳಿಗಿಂತಲೂ ಹಳೆಯದಾದ ಎಲ್ಲ ಸರ್ಕಾರಿ ವಾಹನಗಳು ಮತ್ತು ಖಾಸಗಿ ವಾಹನಗಳನ್ನು ಈ ಕೇಂದ್ರದಲ್ಲಿ ಗುಜರಿಗೆ ಹಾಕಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಸುಮಾರು ಹತ್ತು ಸಾವಿರ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಬೇಕಾಗಬಹುದು’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.