ಬೆಂಗಳೂರು: ‘ನಾಥೂರಾಮ್ ಗೋಡ್ಸೆಯನ್ನೂ ದೇಶಭಕ್ತ ಎನ್ನುವ ಹಂತಕ್ಕೆ ದೇಶ ತಲುಪಿದೆ. ಗಾಂಧಿ ಹಾಗೂ ಗೋಡ್ಸೆ ನಡುವೆ, ಗೋಡ್ಸೆಯನ್ನು ಆಯ್ಕೆ ಮಾಡಿಕೊಳ್ಳುವ ಜನರಿದ್ದಾರೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.
ಚಿಂತನ ಚಿಲುಮೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ, 1962ರ ಭಾರತ-ಚೀನಾ ಯುದ್ದಕ್ಕೆ ಸಂಬಂಧಿಸಿದಂತೆ ಯಡೂರ ಮಹಾಬಲ ರಚಿಸಿರುವ‘ಯುದ್ಧಪೂರ್ವ ಕಾಂಡ’ ಮತ್ತು ‘ಯುದ್ಧಕಾಂಡ’ ಪುಸ್ತಕಗಳ ಬಿಡುಗಡೆ ಹಾಗೂ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಭಯೋತ್ಪಾದನೆ ಹಾಗೂ ಯುದ್ಧೋತ್ಪಾದನೆಯನ್ನು ಎದುರಿಸುತ್ತಿ ದ್ದೇವೆ. ಬಂದೂಕು ಬಾಯಿ ಆಗಿರುವ ಹಾಗೂ ಬಾಯಿಯೇ ಬಂದೂಕಾಗಿರುವ ಭಯೋತ್ಪಾದನೆಗಳಿವೆ. ಬೃಹತ್ ರಾಷ್ಟ್ರಗಳಿಗೆ ಯುದ್ಧವೂ ಒಂದು ಉದ್ಯಮ’ ಎಂದರು.
ರೈತ ಮುಖಂಡ ಜೆ.ಎಂ.ವೀರಸಂಗಯ್ಯ ಮಾತನಾಡಿ, ‘ಹಿಂದೆ ಸಾಮ್ರಾಜ್ಯ ವಿಸ್ತರಣೆ ಸಲುವಾಗಿ ರಾಜರು ಯುದ್ಧ ನಡೆಸಿದರು. ಪ್ರಜಾಪ್ರಭುತ್ವದಲ್ಲಿ ಇಂದು ಗಡಿ ವಿವಾದ ಹಾಗೂ ವ್ಯಾಪಾರಕ್ಕಾಗಿ ಯುದ್ಧ ನಡೆಯುತ್ತಿದೆ. ಯುದ್ಧ ಬೇಡ ಎನ್ನುವವರನ್ನು ದೇಶದ್ರೋಹಿಗಳ ಪಟ್ಟಿಗೆ ಸೇರಿಸುವ ಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ’ ಎಂದರು.
ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಾವಳ್ಳಿ ಶಂಕರ್,ಸಿಪಿಐ ಹಿರಿಯ ಮುಖಂಡಸಿದ್ಧನಗೌಡ ಪಾಟೀಲ, ಲೇಖಕ ಬಿ.ಆರ್.ಮಂಜುನಾಥ್, ರಾಜೇಂದ್ರ ಚೆನ್ನಿ, ಕೆ.ಎನ್. ಉಮೇಶ್ ಮತ್ತು ಪ್ರಕಾಶ್ ಕೃಷ್ಣಪ್ಪ ಭಾಗವಹಿಸಿದ್ದರು.