ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಶಯ ಹಿನ್ನೀರಿನಲ್ಲೂ ಮರಳುಗಾರಿಕೆ

Last Updated 12 ಫೆಬ್ರುವರಿ 2020, 18:12 IST
ಅಕ್ಷರ ಗಾತ್ರ

ಬೆಂಗಳೂರು: ಹಳ್ಳ, ತೊರೆಗಳಲ್ಲಿ ಮರಳು ತೆಗೆಯಲು ಗ್ರಾಮ ಪಂಚಾಯಿತಿಗಳಿಗೆ ಅವಕಾಶ ನೀಡುವುದು; ನದಿ, ಹೊಳೆ, ಜಲಾಶಯ ಹಾಗೂ ಅವುಗಳ ಹಿನ್ನೀರಿನ ಪ್ರದೇಶಗಳಲ್ಲಿ ಲಭ್ಯವಿರುವ ಮರಳು ವಿಲೇವಾರಿಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮೂಲಕ ನಿರ್ವಹಿಸಲು ಸರ್ಕಾರ ಮುಂದಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮರಳು ನೀತಿಯ ಕರಡು ಸಿದ್ಧಪಡಿಸುವ ಸಂಬಂಧ ಅಧಿಕಾರಿಗಳ ಜತೆಗೆ ಚರ್ಚಿಸಿದರು. ಸಿದ್ಧಪಡಿಸಿರುವ ಕರಡನ್ನು ಸಚಿವ ಸಂಪುಟದ ಅನುಮೋದನೆಗೆ ಮಂಡಿಸುವಂತೆ ಸೂಚಿಸಿದರು.

ಹಳ್ಳ, ತೊರೆಗಳಲ್ಲಿ ಟ್ರಾಕ್ಟರ್, ಎತ್ತಿನ ಗಾಡಿಗಳ ಮೂಲಕ ತೆಗೆದ ಮರಳನ್ನು ತಹಶೀಲ್ದಾರ್ ಮೇಲ್ವಿಚಾರಣೆಯಲ್ಲಿ ಸ್ಥಳೀಯ ನಿರ್ಮಾಣ ಕಾಮಗಾರಿಗಳಿಗೆ ಬಳಸುವುದು. ನದಿ, ಜಲಾಶಯಗಳಿಂದ ತೆಗೆದ ಮರಳನ್ನು ದಾಸ್ತಾನುಮಾಡಿ ಸರ್ಕಾರಿ ಸಂಸ್ಥೆಗಳ ಮೂಲಕ ಮಾರಾಟ ಮಾಡುವುದು. ಆನ್‌ಲೈನ್ ಮೂಲಕವೂ ಮಾರಾಟಕ್ಕೆ ಕ್ರಮ ಕೈಗೊಳ್ಳುವುದು. ಸರ್ಕಾರಿ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರಿಗೆ ಮರಳು ಬ್ಲಾಕ್ ಮೀಸಲಿರಿಸಲು ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.

ಬೇಡಿಕೆ:ರಾಜ್ಯದಲ್ಲಿ 4.5 ಕೋಟಿ ಮೆಟ್ರಿಕ್ ಟನ್ ಮರಳಿಗೆ ಬೇಡಿಕೆ ಇದ್ದು, ಎಂ ಸ್ಯಾಂಡ್ ಸೇರಿದಂತೆ ವಿವಿಧ ಮೂಲಗಳಿಂದ ಪೂರೈಕೆ ಮಾಡಲಾಗುತ್ತಿದೆ. ಇನ್ನೂ 85 ಲಕ್ಷ ಮೆಟ್ರಿಕ್ ಟನ್ ಕೊರತೆ ಇದ್ದು, ಈ ಬೇಡಿಕೆ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.

ಕಾರ್ಯಪಡೆಗೆ ಸಲಹೆ

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧೀನದಲ್ಲಿ ಕಾರ್ಯಪಡೆ ಸ್ಥಾಪಿಸಿ, ಅನಧಿಕೃತ ಮರಳು ಗಣಿಗಾರಿಕೆ, ಸಾಗಣೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಲಹೆ ಮಾಡಲಾಗಿದೆ.

ಬೆಸ್ಕಾಂ, ಅರಣ್ಯ ಇಲಾಖೆ, ಬಿಬಿಎಂಪಿಯಲ್ಲಿ ಇರುವಂತೆ ‘ಖನಿಜ ರಕ್ಷಣೆ ಕಾರ್ಯಪಡೆ’ ರಚಿಸಿ, ಗೃಹ ಇಲಾಖೆಯಿಂದ ಅಧಿಕಾರಿಗಳನ್ನು ನಿಯೋಜಿಸುವುದು. ಅಥವಾ ಕಾರ್ಯಪಡೆಗೆ ನೇರ ನೇಮಕಾತಿ ಮೂಲಕ ಅಧಿಕಾರಿಗಳನ್ನು ನೇಮಕಮಾಡಿಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT