ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆ ಮರು ಚಿಂತನೆಗೆ ಆಗ್ರಹ

ಸ್ಯಾಂಕಿ ರಸ್ತೆ ಮೇಲ್ಸೇತುವೆಗೆ ಸ್ಥಳೀಯ ನಾಗರಿಕರ ವಿರೋಧ
Last Updated 31 ಜನವರಿ 2023, 20:21 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಂಕಿ ರಸ್ತೆ ಮೇಲ್ಸೇತುವೆಗೆ ಸ್ಥಳೀಯ ನಾಗರಿಕರ ವಿರೋಧವಿದೆ. ಈ ಯೋಜನೆ ಬಗ್ಗೆ ಮರುಚಿಂತನೆ ನಡೆಸಬೇಕು ಎಂದು ನಿರ್ಣಯ ಕೈಗೊಂಡು ಸರ್ಕಾರ ಹಾಗೂ ಬಿಬಿಎಂಪಿಗೆ ಕಳುಹಿಸಲು ‘ಸ್ಯಾಂಕಿ ಕೆರೆ ತಂಡ’ದ ಸದಸ್ಯರು ನಿರ್ಧರಿಸಿದರು.

ಸ್ಯಾಂಕಿ ರಸ್ತೆ ಮೇಲ್ಸೇತುವೆ ನಿರ್ಮಾಣದ ಬಗ್ಗೆ ವೈಯಾಲಿಕಾವಲ್‌, ಮಲ್ಲೇಶ್ವರ, ಸದಾಶಿವನಗರದ ಜನತೆ, ವ್ಯಾಪಾರಿಗಳು ಹಾಗೂ ತಜ್ಞರು ಮಂಗಳವಾರ ಸಂವಾದ ನಡೆಸಿದರು. ಮೇಲ್ಸೇತುವೆ ನಿರ್ಮಾಣದಿಂದ ಸಂಚಾರ ದಟ್ಟಣೆ ಯಾವುದೇ ರೀತಿಯಲ್ಲಿ ಕಡಿಮೆಯಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟರೆ, ಮೇಲ್ಸೇತುವೆಯಿಂದ ಸ್ಥಳೀಯರಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ ಎಂದು ನಾಗರಿಕರು ಹೇಳಿದರು. ಮೇಲ್ಸೇತುವೆ ನಿರ್ಮಾಣದಿಂದ ಸಮಸ್ಯೆ ಬಗೆಹರಿಯಲಿದೆ, ಎಲ್ಲ ರೀತಿಯ ಮಾಹಿತಿ, ಅಭಿಪ್ರಾಯ ತೆಗೆದುಕೊಂಡೇ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಹೇಳಿದರು.

ಸುಮಾರು ಎರಡೂವರೆ ಗಂಟೆ ನಡೆದ ಸಂವಾದದಲ್ಲಿ ಹೆಚ್ಚು ಹೊತ್ತು ತಜ್ಞರು ಮಾಹಿತಿ ನೀಡಿದರು. ನಂತರ ನಡೆದ 15 ನಿಮಿಷದ ಪ್ರಶ್ನೋತ್ತರ ಗೊಂದಲಮಯವಾಗಿ ಕೊನೆಗೆ ನಿರ್ಣಯವನ್ನು ಪತ್ರದ ಮೂಲಕ ಎಲ್ಲರಿಗೂ ತಲುಪಿಸಲು ನಿರ್ಧರಿಸಿದರು.

ಐಐಎಸ್‌ಸಿಯ ಸುಸ್ಥಿರ ಸಾರಿಗೆ ವಿಭಾಗದ ಪ್ರೊ. ಆಶಿಷ್‌ ವರ್ಮಾ ಅವರು ‘ಮೇಲ್ಸೇತುವೆಗಳಿಂದ ವಾಹನ ದಟ್ಟಣೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಮುಂದಿನ ಜಂಕ್ಷನ್‌ಗಳಲ್ಲಿ ದಟ್ಟಣೆ ಹೆಚ್ಚಾಗಿ ಸಮಯವೂ ಹೆಚ್ಚಾಗಿ ಉಳಿತಾಯವಾಗುವುದಿಲ್ಲ’ ಎಂದು ಅಂಕಿ–ಅಂಶಗಳ ಸಹಿತ ಮಾಹಿತಿ ನೀಡಿದರು.

ಪ್ರಹ್ಲಾದ್‌ ಅವರು ಮೇಲ್ಸೇತುವೆ ಯೋಜನೆ ಬಗ್ಗೆ ಮಾಹಿತಿ ನೀಡಿ, ‘ಸರ್ಕಾರದಿಂದ ಅನುಮತಿ ಪಡೆದು ಆರಂಭಿಸಲಾಗಿದೆ. ದೂರದೃಷ್ಟಿಯಿಂದ ಈ ಮೇಲ್ಸೇತುವೆ ನಿರ್ಮಿಸಲಾಗುತ್ತಿದ್ದು, ವಾಹನ ದಟ್ಟಣೆ ಕಡಿಮೆಯಾಗಲಿದೆ’ ಎಂದರು.

‘ಸ್ಯಾಂಕಿ ರಸ್ತೆ ಮೇಲ್ಸೇತುವೆ ನಿರ್ಮಾಣದಲ್ಲಿ 50ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗುತ್ತದೆ. ಇದರಿಂದ ಪಾರಂಪರಿಕ ಮರಗಳು ಬುಡಮೇಲಾಗುತ್ತವೆ. ಇವುಗಳನ್ನು ರಕ್ಷಿಸಬೇಕು. ಮೇಲ್ಸೇತುವೆ ನಿರ್ಮಾಣದಿಂದ ಸಂಚಾರ ದಟ್ಟಣೆ ನಿವಾರಣೆ ಆಗುವುದಿಲ್ಲ. ಹೀಗಾಗಿ ಮೇಲ್ಸೇತುವೆ ಬೇಡ’ ಎಂಬ ಆಗ್ರಹಕ್ಕೆ ಸಹಿ ಆಂದೋಲನವನ್ನು ಝಟ್ಕಾ.ಒಆರ್‌ಜಿ ಸಂಸ್ಥೆ ವತಿಯಿಂದ ಆಯೋಜಿಸಲಾಗಿತ್ತು. ಸುಮಾರು 25 ಸಾವಿರ ಮಂದಿ ಡಿಜಿಟಲ್‌ ಸಹಿ ಮಾಡಿ, ಆಂದೋಲನಕ್ಕೆ ಬೆಂಬಲಿಸಿದ್ದಾರೆ ಎಂಬ ಮಾಹಿತಿಯನ್ನು ಕಾರ್ಯಕ್ರಮ ನಿರೂಪಿಸಿದ ನಟ ಪ್ರಕಾಶ ಬೆಳವಾಡಿ ನೀಡಿದರು.

ವಕೀಲರಾದ ಹರೀಶ್‌ ನರಸಪ್ಪ, ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ ಸಹ–ಸಂಸ್ಥಾಪಕಿ ಶಾಹೀನ್‌, ಪ್ರೊ.ರವೀಂದ್ರ ರೇ‌ಷ್ಮೆ ಮಾತನಾಡಿದರು.

ಪ್ರಹ್ಲಾದ್‌ರನ್ನು ತರಾಟೆಗೆ ತೆಗೆದುಕೊಂಡ ಜನ

ಸ್ಯಾಂಕಿ ರಸ್ತೆ ಮೇಲ್ಸೇತುವೆಯಿಂದ ಉಂಟಾಗುವ ಪರಿಸರ ನಷ್ಟಕ್ಕೆ ಪರಿಹಾರ ಏನು, ಮೇಲ್ಸೇತುವೆ ನಿರ್ಮಾಣದ ಸಮಯದಲ್ಲಿ ಉಂಟಾಗುವ ಮಾರ್ಗ ಬದಲಾವಣೆಯಿಂದ ಸ್ಥಳೀಯರಿಗಾಗುವ ಸಂಕಷ್ಟಕ್ಕೆ ಪರಿಹಾರ ಯಾವುದು, ಕಾವೇರಿ ಮ್ಯಾಜಿಕ್‌ ಬಾಕ್ಸ್‌ನಲ್ಲಿ ಉಂಟಾಗುವ ದಟ್ಟಣೆಗೆ ಯಾವ ಕ್ರಮ ಕೈಗೊಳ್ಳುತ್ತೀರಿ ಎಂಬ ನಾಗರಿಕರ ಪ್ರಶ್ನೆಗಳಿಗೆ ಉತ್ತರ ನೀಡಲು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ವಿಫಲರಾದರು.

‘ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದಾಗ, ‘ಈ ಮೂಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೆ ನೀವು ಮೇಲ್ಸೇತುವೆ ನಿರ್ಮಾಣವನ್ನು ಹೇಗೆ ಕೈಗೊಳ್ಳುತ್ತೀರಿ’ ಎಂದು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.

‘ನಾಗರಿಕರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಆತಂಕವನ್ನು ಹೋಗಲಾಡಿಸಿ, ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ’ ಎಂದು ಪ್ರಹ್ಲಾದ್‌ ಸುದ್ದಿಗಾರರಿಗೆ ತಿಳಿಸಿದರು.

ಸಚಿವ ಅಶ್ವತ್ಥನಾರಾಯಣ ಎಲ್ಲಿ ಹೋದರು...?

‘ಸ್ಯಾಂಕಿ ರಸ್ತೆ ಮೇಲ್ಸೇತುವೆ ಸಂಬಂಧ ಇಷ್ಟೊಂದು ಚರ್ಚೆ, ವಾದ–ಪ್ರತಿವಾದಗಳು ನಡೆಯುತ್ತಿದ್ದರೂ ಸ್ಥಳೀಯ ಶಾಸಕರೂ ಆಗಿರುವ ಸಚಿವ ಸಿ.ಎನ್‌. ಅಶ್ವತ್ಥನಾರಾಯಣ ಎಲ್ಲಿ ಹೋದರು? ನಮ್ಮ ಈ ಸಮಸ್ಯೆಗೆ ಅವರು ಎಲ್ಲೂ ಪ್ರತಿಕ್ರಿಯಿಸುತ್ತಿಲ್ಲ. ಅವರನ್ನು ಇಲ್ಲಿಗೆ ಕರೆಯಿಸಿ’ ಎಂದು ನಾಗರಿಕರು ಆಗ್ರಹಿಸಿದರು. ಸಂವಾದ ಆಯೋಜಕರು ಕೂಡ ‘ಅಶ್ವತ್ಥನಾರಾಯಣ ಎಲ್ಲಿ’ ಎಂಬ ಪ್ರಶ್ನೆ ನಮಗೂ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT