ಬೆಂಗಳೂರು: ‘ಯಾವ ಸರಸ್ವತಿಯೂ ಮಹಿಳೆಯರಿಗೆ ಶಿಕ್ಷಣ ಕೊಡಲಿಲ್ಲ. ಆದರೆ, ಶಿಕ್ಷಣ ಕೊಡಿಸಿದ್ದು ಸಾವಿತ್ರಿಬಾಯಿ ಫುಲೆ’ ಎಂದು ಬಿ.ಕೃಷ್ಣಪ್ಪ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಕೃಷ್ಣಪ್ಪ ಅಭಿಪ್ರಾಯಪಟ್ಟರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ಮಹಿಳಾ ಒಕ್ಕೂಟ, ಬಿ.ಕೃಷ್ಣಪ್ಪ ಟ್ರಸ್ಟ್ ಏರ್ಪಡಿಸಿದ್ದ ‘ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ 192ನೇ ಜನ್ಮದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಯಾವ ಸಂಪರ್ಕ ಸಾಧನವೂ ಇಲ್ಲದ ಕಾಲದಲ್ಲಿ ಸಾವಿತ್ರಿ ಬಾಯಿ ಫುಲೆ ಅವರು ಪ್ರತಿರೋಧಕ್ಕೂ ಜಗ್ಗದೆ ಮಹಿಳೆಯರಿಗೆ ಶಿಕ್ಷಣ ನೀಡಿದರು. ಅವರನ್ನು ನೆನಪಿಸಿಕೊಂಡು ಮುನ್ನಡೆಯುವ ಅಗತ್ಯವಿದೆ’ ಎಂದರು.
ಸಾಹಿತಿ ವಸುಂದರಾ ಭೂಪತಿ ಅವರು, ‘ಸಾವಿತ್ರಿ ಬಾಯಿ ಫುಲೆ ಅವರು ಪಾಠ ಮಾಡಲು ಹೊರಟರೆ ರಸ್ತೆಯಲ್ಲಿ ಅವರ ಮೇಲೆ ಸಗಣಿ ಎಸೆಯುತ್ತಿದ್ದರು. ಅದಕ್ಕೂ ಅವರು ಜಗ್ಗಲಿಲ್ಲ, ಪತಿ ಜ್ಯೋತಿಬಾ ಫುಲೆ ಅವರಿಂದ ಪಡೆದ ಶಿಕ್ಷಣವನ್ನು ಧೈರ್ಯದಿಂದ ಮಹಿಳೆಯರಿಗೆ ಹಂಚಿದರು’ ಎಂದು ಬಣ್ಣಿಸಿದರು.
‘ಸಗಣಿ ಎಸೆಯುವ ಪುರುಷರ ಪರವಾಗಿ ನಾನೇ ಕ್ಷಮೆ ಕೇಳುತ್ತೇನೆ. ನಿತ್ಯ ಆ ಸೀರೆಯನ್ನು ತೊಳೆದುಕೊಡುತ್ತೇನೆ ಎಂದಿದ್ದರು. ಆ ಮನಸ್ಥಿತಿಯೇ ಸಾವಿತ್ರಿಬಾಯಿ ಅವರಲ್ಲಿ ಧೈರ್ಯ, ಸಹನೆಯನ್ನು ತುಂಬಿತ್ತು’ ಎಂದರು.