ಬೆಂಗಳೂರು: ರಾಜ್ಯ ಸರ್ಕಾರ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಅ.30ರವರೆಗೆ ರಜೆ ಘೋಷಿಸಿದ್ದರೂ, ಬಿಬಿಎಂಪಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಿ ತರಗತಿ ನಡೆಸುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
‘ಜಯನಗರದ ಭೈರಸಂದ್ರದಲ್ಲಿರುವ ಬಿಬಿಎಂಪಿ ಶಾಲೆಯಲ್ಲಿ ಮಕ್ಕಳು ಓದುತ್ತಿದ್ದಾರೆ. ರಾಜ್ಯ ಸರ್ಕಾರ ರಜೆ ಘೋಷಿಸಿದ ನಂತರವೂ ಮಕ್ಕಳನ್ನು ಶಾಲೆಗೆ ಬರಲು ಹೇಳುತ್ತಿದ್ದಾರೆ. ಬಿಬಿ ಎಂಪಿ ಶಿಕ್ಷಕರು ಕೋವಿಡ್ ಕರ್ತವ್ಯದಲ್ಲಿದ್ದಾರೆ. ಬೆಳಿಗ್ಗೆ ಈ ಕೆಲಸ ಮುಗಿಸಿ, ಮಧ್ಯಾಹ್ನ ತರಗತಿಗೆ ಬರುತ್ತಾರೆ. ಶಿಕ್ಷಕರಿಂದ ಮಕ್ಕಳಿಗೆ ಸೋಂಕು ಹರಡಿ ದರೆ ಯಾರು ಜವಾಬ್ದಾರಿ’ ಎಂದು ಪೋಷಕರೊಬ್ಬರು ಪ್ರಶ್ನಿಸಿದರು.
‘ಬಿಬಿಎಂಪಿ ಶಾಲೆಗಳು ಸರ್ಕಾರದ ನಿಯಮ ಪಾಲಿಸಬೇಕು. ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಮಕ್ಕ ಳನ್ನು ಶಾಲೆಗೆ ಕರೆಸದಿರಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
‘ವಿದ್ಯಾಗಮದ ಅಡಿ ಕೈಗೊಳ್ಳುವ ತರಗತಿಗೆ ಹಾಜರಾಗಲು ಕಳೆದ 12ರಂದು ಮೂವರು ವಿದ್ಯಾರ್ಥಿಗಳು ಬಂದಿದ್ದರು. ಆದರೆ, ಈ ಕಾರ್ಯಕ್ರಮ ಸ್ಥಗಿತಗೊಂಡಿದ್ದರ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ. ಶಿಕ್ಷಕರೂ ಬಂದಿರಲಿಲ್ಲ. ಮಳೆ ಬರುತ್ತಿದ್ದರಿಂದ ಮಕ್ಕಳನ್ನು ಶಾಲೆಯೊಳಗೆ ಕರೆದೆವು. ಆದರೆ, ತರಗತಿ ನಡೆಸಿಲ್ಲ’ ಎಂದು ಬಿಬಿಎಂಪಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಶಾಲಾ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಶಿಕ್ಷಕರು ಮನೆ ಮನೆಗೆ ತೆರಳಿ ಪೋಷಕರನ್ನು ಕೋರಿದ್ದರು. ಹೊಸದಾಗಿ ಶಾಲೆ ಸೇರಲು ಬರುವ ವಿದ್ಯಾರ್ಥಿಗಳಿಗೆ ವರ್ಗಾವಣೆ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ದಾಖಲೆಗಳನ್ನು ತಂದುಕೊಡುವಂತೆ ಕರೆ ಮಾಡಿದ್ದೆವು’ ಎಂದು ಅವರು ಸ್ಪಷ್ಟಪಡಿಸಿದರು.
ಕೆಲಸ ಮಾಡಿ, ಸಂಬಳ ಕೇಳಬೇಡಿ: ‘ರಜೆ ಇದ್ದರೂ ನಾವು ಕೋವಿಡ್ ಕರ್ತವ್ಯ ಮಾಡುತ್ತಿದ್ದೇವೆ. ಜೂನ್ನಿಂದ ವಿದ್ಯಾಗಮ ಕಾರ್ಯಕ್ರಮದ ಅಡಿ ಮಕ್ಕಳಿಗೆ ಪಾಠವನ್ನೂ ಮಾಡುತ್ತಿದ್ದೇವೆ. ಆದರೆ, ಜೂನ್ನಿಂದ ಈವರೆಗೆ ವೇತನ ನೀಡಿಲ್ಲ’ ಎಂದು ಬಿಬಿಎಂಪಿ ಶಾಲೆಯಲ್ಲಿನ ಹೊರಗುತ್ತಿಗೆ ಶಿಕ್ಷಕರೊಬ್ಬರು ಹೇಳಿದರು.
‘ಕಾಯಂ ಶಿಕ್ಷಕರು ಮಾಡುವ ಎಲ್ಲ ಕೆಲಸವನ್ನೂ ಮಾಡುತ್ತಿದ್ದೇವೆ. ಬಿಬಿಎಂಪಿ ಅಧಿಕಾರಿಗಳು ನಮ್ಮನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸುತ್ತಿದ್ದಾರೆ. ಆದರೆ, ವೇತನ ಕೇಳಿದರೆ ಮಾತ್ರ ಯಾರೊಬ್ಬರೂ ಪ್ರತಿಕ್ರಿಯಿಸುವುದಿಲ್ಲ. ಹೊರಗುತ್ತಿಗೆ ಏಜೆನ್ಸಿಯವರಿಗೆ ಕೇಳಿದರೆ ಬಿಬಿಎಂಪಿಯಿಂದಲೇ ಹಣ ಪಾವತಿಯಾಗಿಲ್ಲ ಎನ್ನುತ್ತಾರೆ’ ಎಂದು ಅವರು ಅಳಲು ತೋಡಿಕೊಂಡರು.
***
ಜೂನ್ನಲ್ಲಿ ಹಿಂಬಾಕಿ ವೇತನ ನೀಡಲಾಗಿದೆ. ಉಳಿದ ತಿಂಗಳುಗಳ ವೇತನ ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶೀಘ್ರ ದಲ್ಲಿ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು
- ಹರೀಶ್, ಬಿಬಿಎಂಪಿ ಶಿಕ್ಷಣಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.