ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಚಿಕಿತ್ಸೆ: ಸಂಬಳ ಪಾವತಿಗೂ ಸಮಸ್ಯೆ ಎದುರಿಸುತ್ತಿರುವ ಸಣ್ಣ ಆಸ್ಪತ್ರೆಗಳು

ಸರ್ಕಾರದಿಂದ ವೆಚ್ಚ ಮರುಪಾವತಿಗೆ ವಿಳಂಬ
Last Updated 12 ಆಗಸ್ಟ್ 2020, 21:49 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಆಸ್ಪತ್ರೆಯಲ್ಲಿರುವ ಒಟ್ಟು ಹಾಸಿಗೆಗಳಲ್ಲಿ ಶೇ 50ರಷ್ಟನ್ನು ತಾನು ಶಿಫಾರಸು ಮಾಡುವ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಕಾಯ್ದಿರಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಸರ್ಕಾರದ ಶಿಫಾರಸು ಮಾಡಿರುವ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಿರುವ ಆಸ್ಪತ್ರೆಗಳಿಗೆ ಸಕಾಲದಲ್ಲಿ ಬಿಲ್‌ ಪಾವತಿ ಆಗುತ್ತಿಲ್ಲ.

100ಕ್ಕಿಂತ ಕಡಿಮೆ ಹಾಸಿಗೆ ಸಾಮರ್ಥ್ಯದ ಖಾಸಗಿ ಆಸ್ಪತ್ರೆಗಳಂತೂಸರ್ಕಾರದಿಂದ ಹಣ ಬಿಡುಗಡೆ ವಿಳಂಬವಾಗುತ್ತಿರುವುದರಿಂದ ಸಂಕಷ್ಟಕ್ಕೆ ಸಿಲುಕಿವೆ. ವೈದ್ಯಕೀಯ ಸಿಬ್ಬಂದಿ ಹಾಗೂ ಸ್ವಚ್ಛತಾ ಸಿಬ್ಬಂದಿಯ ತಿಂಗಳ ವೇತನ ಪಾವತಿಸುವುದಕ್ಕೂ ಸಮಸ್ಯೆ ಎದುರಾಗಿದೆ ಎಂದು ಕೆಲವು ಆಸ್ಪತ್ರೆಗಳು ಸಮಸ್ಯೆ ತೋಡಿಕೊಂಡಿವೆ.

‘ಮಳೆಗಾಲದಲ್ಲಿ ಡೆಂಗಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಪ್ರತಿ ವರ್ಷ ಈ ಅವಧಿಯಲ್ಲಿ ನಮ್ಮ ಆಸ್ಪತ್ರೆಯಲ್ಲಿ ಕನಿಷ್ಠ 25 ಹಾಸಿಗೆಗಳು ತುಂಬಿರುತ್ತಿದ್ದವು. ನಾವು ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿದ ಬಳಿಕ ಬೇರೆ ಕಾಯಿಲೆ ಹೊಂದಿರುವವರು ಆಸ್ಪತ್ರೆಗೆ ದಾಖಲಾಗಲು ಹಿಂದೇಟು ಹಾಕುತ್ತಿದ್ದಾರೆ. ನಗದು ಹರಿವು ಬಹುತೇಕ ನಿಂತೇ ಬಿಟ್ಟಿದೆ. ಇನ್ನೊಂದೆಡೆ, ಸರ್ಕಾರ ಕಳುಹಿಸಿದ ರೋಗಿಗಳಿಗೆ ನಾವು ಚಿಕಿತ್ಸೆ ನೀಡಿದ ವೆಚ್ಚವೂ ಮರುಪಾವತಿಯಾಗುತ್ತಿಲ್ಲ. ಸಿಬ್ಬಂದಿಗೆ ತಿಂಗಳ ವೇತನ ಪಾವತಿಸುವುದಕ್ಕೂ ಬಿಕ್ಕಟ್ಟು ಎದುರಿಸುತ್ತಿದ್ದೇವೆ’ ಎಂದು ಖಾಸಗಿ ಆಸ್ಪತ್ರೆಯನ್ನು ನಡೆಸುತ್ತಿರುವ, ಹೆಸರು ಬಹಿರಂಗಪಡಿಸಲು ಬಯಸದ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ಕಾಣಿಸಿಕೊಂಡ ಬಳಿಕ ವೈದ್ಯಕೀಯ ಸಿಬ್ಬಂದಿಯ ವೇತನವೂ ದುಪ್ಪಟ್ಟಾಗಿದೆ. ತಿಂಗಳಿಗೆ ₹ 35 ಸಾವಿರಕ್ಕಿಂತ ಕಡಿಮೆ ವೆಚ್ಚಕ್ಕೆ ಯಾವ ನರ್ಸ್‌ಗಳೂ ಕೆಲಸಕ್ಕೆ ಬರುತ್ತಿಲ್ಲ. ತೀವ್ರ ನಿಗಾ ಘಟಕವನ್ನು (ಐಸಿಯು) ನಿರ್ವಹಿಸುವ ವೈದ್ಯರಂತೂ ತಿಂಗಳಿಗೆ ₹ 4.5 ಲಕ್ಷಕ್ಕಿಂತ ಕಡಿಮೆ ಸಂಬಳಕ್ಕೆ ಒಪ್ಪುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವೂ ಹಣ ನೀಡದಿದ್ದರೆ ಆಸ್ಪತ್ರೆಯನ್ನು ನಿರ್ವಹಿಸುವುದಾದರೂ ಹೇಗೆ’ ಎಂದು ಇನ್ನೊಂದು ಆಸ್ಪತ್ರೆಯನ್ನು ನಡೆಸುತ್ತಿರುವ ವೈದ್ಯರೊಬ್ಬರು ಪ್ರಶ್ನಿಸಿದರು.

‘ಕೋವಿಡ್‌ ರೋಗಿಗಳಿಗೆ ಶೇ 50ರಷ್ಟು ಹಾಸಿಗೆ ಮೀಸಲಿಡುವುದನ್ನು ಕಡ್ಡಾಯ ಮಾಡಲಾಗಿದೆ. ನಾವು ಜೂನ್ ಕೊನೆಯ ವಾರದಿಂದಲೇ ಕೋವಿಡ್ ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದೇವೆ. ಇನ್ನೂ 10–15 ದಿನಗಳಲ್ಲಿ ಹಣ ಬಿಡುಗಡೆ ಆಗದಿದ್ದರೆ ಆಸ್ಪತ್ರೆಯನ್ನೇ ಮುಚ್ಚುವ ಸ್ಥಿತಿ ಎದುರಾಗಲಿದೆ’ ಎಂದು ಅವರು ತಿಳಿಸಿದರು.

‘ಕೋವಿಡ್‌ ರೋಗಿಗಳ ಚಿಕಿತ್ಸೆ ವೆಚ್ಚವನ್ನು ಮರುಪಾವತಿಗೆ ಕ್ರಮ ಕೈಗೊಳ್ಳದಿದ್ದರೆ, 50ರಿಂದ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳನ್ನು ನಡೆಸುವುದು ಕಷ್ಟವಾಗುತ್ತದೆ’ ಎಂದು ಜಿಗಣಿಯ ಎಸಿಇ ಸುಹಾಸ್‌ ಆಸ್ಪತ್ರೆಯ ಜಗದೀಶ್‌ ಹಿರೇಮನಿ.

‘ಸರ್ಕಾರ ಶಿಫಾರಸು ಮಾಡಿದ ರೋಗಿ ಚಿಕಿತ್ಸೆಯಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗುವಷ್ಟರಲ್ಲಿ ಸರ್ಕಾರ ಚಿಕಿತ್ಸೆ ವೆಚ್ಚ ಮರುಪಾವತಿ ಮಾಡಿದರೆ ಒಳ್ಳೆಯದು’ ಎನ್ನುತ್ತಾರೆ ಹೆಗಡೆನಗರದ ರೀಗಲ್‌ ಆಸ್ಪತ್ರೆಯ ಡಾ.ಸೂರಿರಾಜು.

‘ಜುಲೈ ಕೊನೆ ವಾರದಿಂದ ವೆಚ್ಚ ಮರುಪಾವತಿ’
‘ಜೂನ್‌ 26ರಿಂದ ಖಾಸಗಿ ಆಸ್ಪತ್ರೆಗಳಿಗೂ ಸರ್ಕಾರ ಶಿಫಾರಸು ಮಾಡಿದ ಕೋವಿಡ್‌ ರೋಗಿಗಳನ್ನು ದಾಖಲಿಸುವ ಕಾರ್ಯ ಆರಂಭವಾಗಿತ್ತು. ಚಿಕಿತ್ಸೆಯ ವೆಚ್ಚ ಮರುಪಾವತಿಸುವ ಕಾರ್ಯ ಜುಲೈ ತಿಂಗಳ ಕೊನೆಯ ವಾರದಿಂದಷ್ಟೇ ಶುರುವಾಗಿದೆ’ ಎಂದು ಕೋವಿಡ್‌ ಚಿಕಿತ್ಸೆಯ ವೆಚ್ಚ ಮರುಪಾವತಿಯ ಹೊಣೆ ಹೊತ್ತಿರುವಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕಿ ಎನ್‌.ಟಿ.ಆಬ್ರೂ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದಾದ್ಯಂತ ಇದುವರೆಗೆ 24 ಸಾವಿರಕ್ಕೂ ಅಧಿಕ ಕೋವಿಡ್‌ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಇವರ ಚಿಕಿತ್ಸೆ ವೆಚ್ಚ ಮರುಪಾವತಿಗೆ ಸುಮಾರು ₹ 16 ಕೋಟಿಗಳಷ್ಟು ವೆಚ್ಚವಾಗಲಿದೆ. ನಮಗೆ ಇದುವರೆಗೆ 5,400 ರೋಗಿಗಳ ಬಿಲ್‌ ಪಾವತಿ ಸಂಬಂಧ ಆಸ್ಪತ್ರೆಗಳು ಕ್ಲೇಮುಗಳನ್ನು ಸಲ್ಲಿಸಿವೆ. ಅವುಗಳನ್ನ ಪರಿಶೀಲಿಸಿ ಇಂದಿನವರೆಗೆ 318 ರೋಗಿಗಳ ಚಿಕಿತ್ಸೆಯ ವೆಚ್ಚ ಮರುಪಾವತಿಗೆ ₹ 1.38 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಅವರು ವಿವರಿಸಿದರು.

‘ಬಿಲ್‌ ಸಲ್ಲಿಸಿದ ತಕ್ಷಣ ಅದರ ಮರುಪಾವತಿ ಸಾಧ್ಯವಿಲ್ಲ. ಕೋವಿಡ್‌ ರೋಗಿಗೆ ನೀಡಲಾದ ಬಿ.ಯು ಸಂಖ್ಯೆ ಅಥವಾ ಎಸ್‌ಆರ್‌ಎಫ್‌ ಸಂಖ್ಯೆಯನ್ನು ಆಸ್ಪತ್ರೆಯವರು ಸಲ್ಲಿಸಬೇಕು. ಪ್ರತಿ ರೋಗಿಯ ಚಿಕಿತ್ಸೆಯ ವಿವರಗಳಿರುವ ಕೇಸ್‌ ಶೀಟ್‌, ಪ್ರಯೋಗಾಲಯದ ತಪಾಸಣೆಯ ವಿವರಗಳು, ನರ್ಸಿಂಗ್‌ ಶೀಟ್‌ ಮತ್ತಿತರ ದಾಖಲೆಗಳನ್ನೂ ಒದಗಿಸಬೇಕಾಗುತ್ತದೆ. ಅವುಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಹಣ ಬಿಡುಗಡೆ ಸಾಧ್ಯ’ ಎಂದು ಸ್ಪಷ್ಟಪಡಿಸಿದರು.

‘ರೋಗಿಯಿಂದ ಹಣ ಪಡೆದಿದ್ದರೆ, ವೆಚ್ಚ ಮರುಪಾವತಿ ಇಲ್ಲ’
‘ಕೆಲವು ಆಸ್ಪತ್ರೆಗಳು ಸರ್ಕಾರ ಶಿಫಾರಸು ಮಾಡಿದ ರೋಗಿಗಳಿಂದಲೂ ಶುಲ್ಕ ವಸೂಲಿ ಮಾಡಿರುವ ದೂರುಗಳಿವೆ. ಹಾಗಾಗಿ ನಾವು ಆಸ್ಪ‍ತ್ರೆಯಿಂದ ಬಿಡುಗಡೆಯಾಗಿರುವ ಪ್ರತಿಯೊಬ್ಬ ರೋಗಿಗಳಿಗೆ ಅಥವಾ ಅವರ ಬಂಧುಗಳಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸುತ್ತಿದ್ದೇವೆ. ಯಾವುದಾದರೂ ರೋಗಿಯಿಂದ ಆಸ್ಪತ್ರೆಯವರು ಹಣ ಪಡೆದಿದ್ದರೆ, ಅಂತಹ ಬಿಲ್‌ಗಳನ್ನು ಪಾವತಿಸುವುದಿಲ್ಲ’ ಎಂದುಎನ್‌.ಟಿ.ಆಬ್ರೂ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT