ಈ ಅಭಿಯಾನದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಬಿಎಂಪಿ ವಿಶೇಷ ಆಯುಕ್ತ (ಕಸ ನಿರ್ವಹಣೆ) ಡಿ.ರಂದೀಪ್, ‘ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರು ಎಲ್ಲೆಂದರಲ್ಲಿ ಉಗುಳುವುದು ತಪ್ಪು. ಇದರಿಂದ ಕೋವಿಡ್, ಕ್ಷಯದಂತಹ ರೋಗಗಳು ಹರಡಲಿವೆ. ಬಾಯಲ್ಲಿ ತಂಬಾಕು ಜಗಿದು, ನಗರದ ಸಂಚಾರ ಸಿಗ್ನಲ್, ಬಸ್ ನಿಲ್ದಾಣ, ಪ್ರಯಾಣಿಕರ ತಂಗುದಾಣ, ರಸ್ತೆ ವಿಭಜಕ, ಉದ್ಯಾನ ಸೇರಿದಂತೆ ಇನ್ನಿತರೆ ಪ್ರಮುಖ ಸ್ಥಳಗಳಲ್ಲಿ ಉಗುಳಿದರೆ ಆ ಸ್ಥಳಗಳ ಸೌಂದರ್ಯವೂ ಹಾಳಾಗಲಿದೆ. ಎಲ್ಲರೂ ರಾಜಾರೋಷವಾಗಿ ಉಗುಳುತ್ತಾರೆ. ಯಾರಲ್ಲೂ ಈ ಬಗ್ಗೆ ಪಶ್ಚಾತ್ತಾಪದ ಭಾವನೆ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.