‘ಪಿ.ಜಿಯಿಂದ ಕಾಲೇಜಿಗೆ ತೆರಳುತ್ತಿದ್ದ. ಮಾತ್ರೆ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾಲೇಜಿನ ಡೀನ್ ಕಿರುಕುಳವೇ ಕಾರಣವೆಂದು ಪೋಷಕರು ದೂರು ನೀಡಿದ್ದಾರೆ. ಡೀನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
‘ಡೀನ್ ಕಿರುಕುಳದ ವಿಚಾರವನ್ನು ಪುತ್ರ ತಿಳಿಸಿದ್ದ. ಕಿರುಕುಳದಿಂದ ಬೇಸತ್ತು ಮನೆಯಲ್ಲಿದ್ದ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾತ್ರೆ ಸೇವಿಸಿದ್ದು ಗೊತ್ತಾದ ಕೂಡಲೇ ನಾಗರಬಾವಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು’ ಎಂದು ಪೋಷಕರು ತಿಳಿಸಿದರು.
‘ನನ್ನ ಎದುರೇ ಅವಮಾನ’: ‘ನನ್ನ ಮಗನಿಗೆ ಆದ ಸ್ಥಿತಿ ಬೇರೆ ಯಾವ ವಿದ್ಯಾರ್ಥಿಗೂ ಆಗಬಾರದು. ಕಾಲೇಜಿನವರೇ ನನ್ನ ಮಗನನ್ನು ಕೊಂದಿದ್ದಾರೆ. ಗಲಾಟೆ ವಿಚಾರದಲ್ಲಿ ನನ್ನ ಮಗನನ್ನು ಅಮಾನತು ಮಾಡಲಾಗಿತ್ತು. ಆ ವಿಚಾರದಲ್ಲಿ ಚರ್ಚಿಸಲು ಕಾಲೇಜಿಗೆ ತೆರಳಿದಾಗ ನನ್ನ ಎದುರೇ ಮಗನಿಗೆ ಅವಮಾನ ಮಾಡಲಾಯಿತು. ಡೀನ್ ಅವಾಚ್ಯ ಶಬ್ದಗಳಿಂದ ನಿಂದಿಸಿದರು’ ಎಂದು ವಿದ್ಯಾರ್ಥಿಯ ತಾಯಿ ಆಕ್ರೋಶ ಹೊರಹಾಕಿದ್ದಾರೆ.
ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆ: ಕಿರುಕುಳ ನೀಡಿದವರನ್ನು ಬಂಧಿಸುವಂತೆ ಆಗ್ರಹಿಸಿ, ಪೋಷಕರು ಹಾಗೂ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ಕಾಲೇಜು ಎದುರು ಮೃತದೇಹವನ್ನು ಕೊಂಡೊಯ್ದು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಪೊಲೀಸರ ಮನವಿ ಮೇರೆಗೆ ಇದನ್ನು ಕೈಬಿಟ್ಟರು.
‘ಅಗತ್ಯಬಿದ್ದರೆ ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲಾಗುವುದು. ಕಾಲೇಜಿನ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು.