ಬೆಂಗಳೂರು: ನಗರದಲ್ಲಿ ಅಹಿತಕರ ಘಟನೆಗಳು, ವಿಶೇಷ ಕರ್ತವ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಸ್ಪಂದಿಸಲು ನುರಿತ(ಸ್ವ್ಯಾಟ್) ತಂಡಗಳನ್ನು ರಚಿಸಿ, ತರಬೇತಿ ನೀಡಿ ಪೊಲೀಸ್ ಇಲಾಖೆ ಸನ್ನದ್ಧಗೊಳಿಸಿದೆ.
ಇದಕ್ಕಾಗಿ ಸಿಎಆರ್ ಘಟಕಗಳಿಂದ ಒಟ್ಟು 120 ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ. ಈ ತಂಡಕ್ಕೆಭಯೋತ್ಪಾದನೆ ನಿಗ್ರಹ ಕೇಂದ್ರವು(ಸಿಸಿಟಿ) ಅಗರದ ಆಂತರಿಕ ಭದ್ರತೆ ವಿಭಾಗದಲ್ಲಿ ಎಂಟು ವಾರಗಳ ವಿಶೇಷ ತರಬೇತಿ ನೀಡಿದೆ.
‘ಭಯೋತ್ಪಾದಕ ಮತ್ತು ನಕ್ಸಲ್ ಕೃತ್ಯಗಳು, ಸಮಾಜ ವಿರೋಧಿ ಚಟುವಟಿಕೆಗಳು, ಅಂತರರಾಷ್ಟ್ರೀಯ ಮಹತ್ವವುಳ್ಳ ಕಾರ್ಯಕ್ರಮಗಳ ಭದ್ರತೆ ಹಾಗೂ ಆಧುನಿಕ ಆಯುಧಗಳ ಬಗ್ಗೆ ಈ ವಿಶೇಷ ತಂಡಗಳಿಗೆ ತರಬೇತಿ ನೀಡಲಾಗಿದೆ’ ಎಂದುಸಿಸಿಬಿ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.
‘ತರಬೇತಿ ಪಡೆದವರನ್ನು ನಾಲ್ಕು ತಂಡಗಳಾಗಿ ವಿಭಜಿಸಿ, ನಗರದಲ್ಲಿ ಅಗತ್ಯವಿರುವ ಸ್ಥಳಗಳಿಗೆ ನಿಯೋಜಿಸಲಾಗಿದೆ.ಪ್ರತಿ ತಂಡದಲ್ಲಿ 30 ಸಿಬ್ಬಂದಿ ಹಾಗೂ ಇಬ್ಬರು ರಿಸರ್ವ್ ಸಬ್ ಇನ್ಸ್ಪೆಕ್ಟರ್ (ಆರ್ಎಸ್ಐ) ಕಾರ್ಯನಿರ್ವಹಿಸಲಿದ್ದಾರೆ. ಮುಂದಿನ ಹಂತದಲ್ಲಿ ಇನ್ನೂ ಎರಡು ತಂಡಗಳಿಗೆ ತರಬೇತಿ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.