ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ: ಶಿಕ್ಷಕರ ವಿಚಾರಣೆ

Last Updated 9 ನವೆಂಬರ್ 2022, 19:32 IST
ಅಕ್ಷರ ಗಾತ್ರ

ಬೆಂಗಳೂರು: ಸಂಪಿಗೆಹಳ್ಳಿ‌ ಠಾಣೆ ವ್ಯಾಪ್ತಿಯಲ್ಲಿ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ 14ನೇ ಮಹಡಿಯಿಂದ ಜಿಗಿದು ಮೋಹಿನ್ (16) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಸ್ಥಳೀಯ ನಿವಾಸಿ ಮೋಹಿನ್, ನಾಗವಾರ ಬಳಿಯ ಶಾಲೆಯೊಂದರಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ. ಮಂಗಳವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

'ಶಾಲೆಯಲ್ಲಿ ಮಂಗಳವಾರ ಇಂಗ್ಲಿಷ್ ಭಾಷೆ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಗೆ ಹಾಜರಾಗಿದ್ದ ಮೋಹಿನ್, ನಕಲು ಮಾಡಲು ಯತ್ನಿಸಿದ್ದ. ಅದನ್ನು ನೋಡಿದ್ದ ಶಿಕ್ಷಕರು, ಬೈದಿದ್ದರು. ಆತನನ್ನು ಕೊಠಡಿಯ ಹೊರಗೆ ನಿಲ್ಲಿಸಿದ್ದರು. ಸ್ಥಳದಲ್ಲಿ ಕೆಲ ನಿಮಿಷ ನಿಂತಿದ್ದ ಮೋಹಿನ್, ಯಾರಿಗೂ ಹೇಳದೇ ಶಾಲೆಯಿಂದ ಅಪಾರ್ಟ್‌ಮೆಂಟ್ ಸಮುಚ್ಚಯಕ್ಕೆ ಬಂದಿದ್ದ. ಶಾಲಾ ಸಮವಸ್ತ್ರದಲ್ಲೇ 14ನೇ ಮಹಡಿಗೆ ಹೋಗಿ, ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ’ ಎಂದು ತಿಳಿಸಿದರು.

‘ಪರೀಕ್ಷೆಯಲ್ಲಿ ನಕಲು ಮಾಡಿದನೆಂಬ ಕಾರಣಕ್ಕೆ ಶಿಕ್ಷಕರು ಬೈದು, ಹೊಡೆದಿದ್ದಾರೆ. ತರಗತಿಯ ಹೊರಗೆ ನಿಲ್ಲಿಸಿ ಕಿರುಕುಳ‌ ನೀಡಿದ್ದಾರೆ. ಇದರಿಂದ ನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಪೋಷಕರು ದೂರು ನೀಡಿದ್ದಾರೆ.’

‘ಶಿಕ್ಷಕರನ್ನು ವಿಚಾರಣೆ ಮಾಡಲಾಗಿದ್ದು, ‘ನಕಲು ಮಾಡಿದ್ದಕ್ಕೆ ಕೊಠಡಿ ಹೊರಗೆ ನಿಲ್ಲಿಸಲಾಗಿತ್ತು. ಕೆಲ ನಿಮಿಷ ಬಿಟ್ಟು ಒಳಗೆ ಕರೆಯಲು ಹೋದಾಗ, ಮೋಹಿನ್ ಸ್ಥಳದಲ್ಲಿ ಇರಲಿಲ್ಲ. ಹಲವೆಡೆ ಹುಡುಕಾಡಿದರೂ ಪತ್ತೆಯಾಗಲಿಲ್ಲ’ ಎಂದಿದ್ದಾರೆ. ಎಲ್ಲ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT