ಹೆಬ್ಬಾಳ–ನಾಗವಾರ ಕಣಿವೆಯ 65 ಕೆರೆಗಳಿಗೆ ಶುದ್ಧೀಕರಿಸಿದ ತ್ಯಾಜ್ಯ ನೀರು ತುಂಬಿಸುವ ಯೋಜನೆಗೆ ಸಿಂಗನಾಯಕನಹಳ್ಳಿ ಕೆರೆಯನ್ನು ಆಯ್ಕೆ ಮಾಡಲಾಗಿದೆ. ಈ ಕೆರೆಯು ಸಿಂಗನಾಯಕನಹಳ್ಳಿ ಅಮಾನಿ ಕೆರೆ ಗ್ರಾಮದ ಸರ್ವೆ ನಂಬರ್ 33, ನಾಗದಾಸನಹಳ್ಳಿ ಗ್ರಾಮದ ಸರ್ವೆ ನಂಬರ್ 39, ಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್ 12, ಅದ್ದಿಗಾನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 7ರ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. 400 ಎಕರೆಗಳಷ್ಟು ವ್ಯಾಪಿಸಿರುವ ಕೆರೆಯಂಗಳದಲ್ಲಿ ಜಾಲಿ, ನೇರಳೆ, ಬೇವು, ನೀಲಗಿರಿ, ಸಿಹಿ ಹುಣಸೆ, ಅಕೇಶಿಯಾ, ಹೊಂಗೆ ಶಿವಾನಿ ಮೊದಲಾದ ಮರಗಳಿವೆ. ಇವುಗಳ ತೆರವಿಗೆ ಅನುಮತಿ ಕೋರಿ ಸಣ್ಣ ನೀರಾವರಿ ಇಲಾಖೆಯು ಅರಣ್ಯ ಇಲಾಖೆಗೆ ಪ್ರಸ್ತಾಪ ಸಲ್ಲಿಸಿದೆ. ಇಲ್ಲಿ ವಿವಿಧ ಜಾತಿಗಳ 6,316 ಜಾತಿಯ ಮರಗಳಿದ್ದು, ಅವುಗಳಿಂದ 403.211 ಘನ ಮೀ. ನಾಟಾ ಹಾಗೂ 3,46,915 ಕೆ.ಜಿ ಸೌದೆ ಲಭಿಸುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.