ಬೆಂಗಳೂರು: ‘ಅಂಚೆ ಇಲಾಖೆಯ ಎಲ್ಲ ವ್ಯವಸ್ಥೆಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಯುತ್ತಿದೆ’ ಎಂದು ಅಖಿಲ ಭಾರತ ಅಂಚೆ ನೌಕರರ ಸಂಘದ ಕರ್ನಾಟಕ ವೃತ್ತದ ಕಾರ್ಯಾಧ್ಯಕ್ಷ ಜಿ.ಜಾನಕಿರಾಮ್ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಅಖಿಲ ಭಾರತ ಅಂಚೆ ನೌಕರರ ಸಂಘದ 33ನೇ ವಿಭಾಗೀಯ ಸಮಾವೇಶದಲ್ಲಿ ಮಾತನಾಡಿದ ಅವರು, ‘ಖಾಸಗೀಕರ ಣದ ವಿರುದ್ಧ ಹೋರಾಟ ಮಾಡಬೇ ಕಿದೆ. ಖಾಸಗೀಕರಣಕ್ಕೆ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ.ಅಂಚೆ ಇಲಾಖೆಯಲ್ಲಿದ್ದ ಪಾರ್ಸೆಲ್ ಸೇವೆ ಸಹ ಪ್ರತ್ಯೇಕಗೊಳಿಸುವ ಕಾರ್ಯ ನಡೆಯುತ್ತಿದೆ’ ಎಂದು ಹೇಳಿದರು. ‘ಅಂಚೆ ಇಲಾಖೆಯ ಉಳಿತಾಯ ಖಾತೆಯನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಆಗಿ ಪರಿವರ್ತಿಸಲಾಗಿದೆ. ಇದು ಸುರಕ್ಷಿತ ಅಲ್ಲ. ಇತ್ತೀಚೆಗೆ ಶಹಾಪುರದಲ್ಲಿ ಗ್ರಾಹಕರಿಗೆ ಮೋಸ ಎಸಗಲಾಗಿದೆ. ಇದರ ವಿರುದ್ಧ ಧ್ವನಿಯೆತ್ತಬೇಕು’ ಎಂದರು. ವೃತ್ತ ಕಾರ್ಯದರ್ಶಿ ಪಿ.ಮಲ್ಲಿಕಾರ್ಜುನ ಮಾತನಾಡಿ, ‘ಖಾಸಗೀಕರಣದಿಂದ ನೌಕರರು ಹಾಗೂ ಗ್ರಾಹಕರಿಗೆ ಮೋಸ ಆಗಲಿದೆ’ ಎಂದರು.
ಅಖಿಲ ಭಾರತ ಅಂಚೆ ನೌಕರರ ಸಂಘದ ಅಧ್ಯಕ್ಷ ಡಿ.ರವಿಶಂಕರ್, ಅಮಿತ್ ಕುಮಾರ್ ಜಹ, ಕೆ.ರಾಧಾಕೃಷ್ಣ, ಚಂದನ್ ಸ್ವಾಮಿ, ಬಿ.ವಿಜಯ್ ನಾಯರಿ, ಆರ್.ಶ್ರೀನಿವಾಸ್, ಎಸ್ಸಿ–ಎಸ್ಟಿ ಒಕ್ಕೂಟದ ವೃತ್ತ ಕಾರ್ಯದರ್ಶಿ ವಿ.ಕೃಷ್ಣಮೂರ್ತಿ ಇದ್ದರು.