ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮ ಹಗರಣ: ಸಚಿವ ನಾಗೇಂದ್ರ ಆಪ್ತ ಸೇರಿ ಇಬ್ಬರ ಬಂಧನ

ಮಾಜಿ ಸಚಿವ ಶ್ರೀರಾಮುಲು ಜತೆಗೂ ಇದ್ದ ನಾಗರಾಜ್ *ಚುರುಕು ಪಡೆಯಲಿದೆ ಸಿಬಿಐ ತನಿಖೆ
Published 5 ಜೂನ್ 2024, 23:47 IST
Last Updated 5 ಜೂನ್ 2024, 23:47 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ₹94.73 ಕೋಟಿ ಹಣ ಅಕ್ರಮ ವರ್ಗಾವಣೆ’ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ನೆಕ್ಕಂಟಿ ನಾಗರಾಜ್ ಹಾಗೂ ಅವರ ಬಾಮೈದ ನಾಗೇಶ್ವರರಾವ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

‘ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಮರ್ಲಾನಹಳ್ಳಿಯ ನೆಕ್ಕಂಟಿ ನಾಗರಾಜ್, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರ ಆಪ್ತ. ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಜೆ.ಜಿ. ಪದ್ಮನಾಭ್ (55), ಲೆಕ್ಕಾಧಿಕಾರಿಯಾಗಿದ್ದ ಪರಶುರಾಮ್ ಜಿ. ದುರ್ಗಣ್ಣನವರ ಹಾಗೂ ಇತರರ ಜೊತೆ ಸೇರಿ ಕೃತ್ಯ ಎಸಗಿರುವುದು ಪುರಾವೆಗಳಿಂದ ಗೊತ್ತಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ನಾಗರಾಜ್ ಅವರ ಬಾಮೈದನಾದ ನಾಗೇಶ್ವರರಾವ್, ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯ (ಎಫ್‌ಎಫ್‌ಸಿಸಿಎಸ್‌ಎಲ್‌) ಅಧ್ಯಕ್ಷ ಸತ್ಯನಾರಾಯಣ್ ಹಾಗೂ ಇತರರ ಜೊತೆ ಒಡನಾಟ ಹೊಂದಿದ್ದ. ಹಣ ಅಕ್ರಮ ವರ್ಗಾವಣೆ ಸಂಚಿನಲ್ಲಿ ಈತ ಪ್ರಮುಖ ಆರೋಪಿ. ಈತನೇ ಹೈದರಾಬಾದ್‌ನ ಹಲವರು ಕಂಪನಿಗಳ ಮುಖ್ಯಸ್ಥರನ್ನು ಪದ್ಮನಾಭ್ ಅವರಿಗೆ ಭೇಟಿ ಮಾಡಿಸಿದ್ದ. ನಂತರವೇ ಮಾತುಕತೆ ನಡೆದು, ಹಣ ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು’ ಎಂದು ತಿಳಿಸಿವೆ.

‘ಪದ್ಮನಾಭ್, ಪರಶುರಾಮ್ ಹಾಗೂ ಸತ್ಯನಾರಾಯಣ ಅವರನ್ನು ಈಗಾಗಲೇ ಬಂಧಿಸಲಾಗಿದೆ.  ನಾಗರಾಜ್ ಹಾಗೂ ನಾಗೇಶ್ವರರಾವ್ ಅವರನ್ನು ಸೆರೆ ಹಿಡಿಯಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಇವರಿಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಖಾಸಗಿ ಆಪ್ತ ಸಹಾಯಕ: ‘ನೆಕ್ಕಂಟಿ ನಾಗರಾಜ್, ಈ ಮೊದಲು ಮಾಜಿ ಸಚಿವ, ಬಿಜೆಪಿಯ ಬಿ. ಶ್ರೀರಾಮುಲು ಜೊತೆ ಗುರುತಿಸಿಕೊಂಡಿದ್ದ. 2013ರಲ್ಲಿ ಬಿಎಸ್‌ಆರ್‌ ಪಕ್ಷದಿಂದ ಕೊಪ್ಪಳ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ’ ಎಂದು ಮೂಲಗಳು ಹೇಳಿವೆ.

‘ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ನಾಗರಾಜ್, ಕಾಂಗ್ರೆಸ್ ಸರ್ಕಾರ ಬಂದ ತರುವಾಯ ಸಚಿವ ಬಿ. ನಾಗೇಂದ್ರ ಅವರ ಖಾಸಗಿ ಆಪ್ತ ಸಹಾಯಕನಾಗಿ ಗುರುತಿಸಿಕೊಂಡಿದ್ದ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಈತ ಪ್ರಮುಖ ಪಾತ್ರ ವಹಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿವೆ.

ಲಭ್ಯವಾಗದ ದೃಶ್ಯಗಳು: ‘ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಬ್ಯಾಂಕ್ ಅಧಿಕಾರಿಗಳು, ನಿಗಮದ ಕಚೇರಿಗೆ ಮೇ 21 ಹಾಗೂ 22ರಂದು ಹಲವು ಬಾರಿ ಭೇಟಿಯಾಗಿರುವುದು ಗೊತ್ತಾಗಿದೆ. ನಿಗಮದ ಕಚೇರಿಯಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ದೃಶ್ಯಗಳು ಲಭ್ಯವಾಗಿಲ್ಲ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ನಿಗಮದ ಕಚೇರಿಯಲ್ಲಿರುವ ಕ್ಯಾಮೆರಾದಲ್ಲಿ 9 ದಿನಗಳ ದೃಶ್ಯಗಳನ್ನು ಮಾತ್ರ ಸಂಗ್ರಹಿಸುವ ಸಾಮರ್ಥ್ಯವಿದೆ. ಹೀಗಾಗಿ, ಹೆಚ್ಚು ದೃಶ್ಯಗಳು ಲಭ್ಯವಾಗಿಲ್ಲ’ ಎಂದು ತಿಳಿಸಿವೆ.

ಶಾಂಗ್ರಿಲಾ ಹೋಟೆಲ್‌ನಲ್ಲಿ ಭೇಟಿ: ‘ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಪ್ರಭಾವಿ ರಾಜಕಾರಣಿ ಹಾಗೂ ಅವರ ಆಪ್ತ, ಶಾಂಗ್ರಿಲಾ ಹೋಟೆಲ್‌ನಲ್ಲಿ ಆಗಾಗ ಭೇಟಿಯಾಗಿರುವ ದಾಖಲೆಗಳು ಪತ್ತೆಯಾಗಿವೆ. ಇವುಗಳ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ಸಿಬಿಐಗೆ ಕಡತ ಹಸ್ತಾಂತರ: ‘ಹಣ ಅಕ್ರಮ ವರ್ಗಾವಣೆಗೆ ಸಂಬಂಧಪಟ್ಟಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ಪೂರ್ವ ವಲಯದ ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ) ಮಹೇಶ್ ಜೆ. ಅವರ ದೂರು ಆಧರಿಸಿ ಸಿಬಿಐ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರವೇ ಪ್ರಕರಣದ ಕಡತಗಳು ಸಿಬಿಐಗೆ ಹಸ್ತಾಂತರ ಮಾಡಲಾಗುವುದು’ ಎಂದು ಮೂಲಗಳು ತಿಳಿಸಿವೆ.

‘ಆತ್ಮಹತ್ಯೆಗೂ ಮುನ್ನ ವಿಧಾನಸೌಧದಲ್ಲಿ ದೂರು’
ಅಧೀಕ್ಷಕ ಪಿ. ಚಂದ್ರಶೇಖರ್ ಅವರು ಆತ್ಮಹತ್ಯೆಗೂ ಮುನ್ನ ವಿಧಾನಸೌಧದಲ್ಲಿ ಪ್ರಭಾವಿಯೊಬ್ಬರನ್ನು ಭೇಟಿಯಾಗಿ ಹಣ ಅಕ್ರಮ ವರ್ಗಾವಣೆಗೆ ಸಂಬಂಧಪಟ್ಟಂತೆ ದೂರು ನೀಡಿದ್ದರೆಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ. ‘ನಿಗಮದ ಅಧೀಕ್ಷಕರಾಗಿದ್ದ ಚಂದ್ರಶೇಖರ್‌ ಅವರಿಗೆ ಹಣ ಅಕ್ರಮ ವರ್ಗಾವಣೆ ಬಗ್ಗೆ ತಡವಾಗಿ ಗೊತ್ತಾಗಿತ್ತು. ಈ ಬಗ್ಗೆ ಅವರು ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಜೆ.ಜಿ. ಪದ್ಮನಾಭ (55) ಮತ್ತು ಲೆಕ್ಕಾಧಿಕಾರಿಯಾಗಿದ್ದ ಪರಶುರಾಮ್ ಜಿ. ದುರ್ಗಣ್ಣನವರ (40) ಜೊತೆ ಚರ್ಚಿಸಿದ್ದರು. ಆದರೆ ಪದ್ಮನಾಭ ಹಾಗೂ ಪರಶುರಾಮ್ ಅವರ ಸಹಿ ಹಾಗೂ ಮೊಹರು ಇದ್ದ ಚೆಕ್‌ ಮೂಲಕವೇ ಹಣ ವರ್ಗಾವಣೆ ಆಗಿದ್ದು ತದನಂತರ ಗೊತ್ತಾಗಿತ್ತು’ ಎಂದು ಎಸ್‌ಐಟಿ ಮೂಲಗಳು ಹೇಳಿವೆ. ‘ಹಣ ಅಕ್ರಮ ವರ್ಗಾವಣೆ ಬಗ್ಗೆ ತಮಗೇನು ಗೊತ್ತಿಲ್ಲದಂತೆ ನಟಿಸಿದ್ದ ‍ಪರಶುರಾಮ್ ‘ಈ ಬಗ್ಗೆ ನಿಗಮದ ಉನ್ನತ ಹುದ್ದೆಯಲ್ಲಿರುವ ಪ್ರಭಾವಿಗೆ ದೂರು ನೀಡೋಣ. ಅವರು ತನಿಖೆ ಮಾಡಿಸುತ್ತಾರೆ. ನಮ್ಮ ಕೆಲಸಕ್ಕೆ ಯಾವುದೇ ಕುತ್ತು ಬರುವುದಿಲ್ಲ’ ಎಂದು ಚಂದ್ರಶೇಖರ್ ಅವರಿಗೆ ಹೇಳಿದ್ದ. ನಂತರ ಚಂದ್ರಶೇಖರ್ ಹಾಗೂ ಪರಶುರಾಮ್ ಅವರು ಪ್ರಭಾವಿಗೆ ಕರೆ ಮಾಡಿ ಭೇಟಿಗೆ ಸಮಯ ಪಡೆದುಕೊಂಡಿದ್ದರು.’ ‘ವಿಧಾನಸೌಧದಲ್ಲಿರುವ ಸಚಿವರೊಬ್ಬರ ಕೊಠಡಿಯಲ್ಲಿ ಇರುವುದಾಗಿ ಹೇಳಿದ್ದ ಪ್ರಭಾವಿ ಮೇ 24ರಂದು ಬೆಳಿಗ್ಗೆ 10.30 ಗಂಟೆಗೆ ಚಂದ್ರಶೇಖರ್ ಹಾಗೂ ಪರಶುರಾಮ್ ಅವರನ್ನು ಕರೆಸಿಕೊಂಡಿದ್ದ. ಮಧ್ಯಾಹ್ನ 12 ಗಂಟೆಯವರೆಗೂ ಇಬ್ಬರೂ ಪ್ರಭಾವಿ ಜೊತೆಗಿದ್ದರು’ ಎಂದು ಮೂಲಗಳು ತಿಳಿಸಿವೆ. ‘ಹಣ ಅಕ್ರಮ ವರ್ಗಾವಣೆ ಸಂಬಂಧ ಪ್ರಭಾವಿಗೆ ದಾಖಲೆಗಳನ್ನು ನೀಡಿದ್ದ ಇಬ್ಬರೂ ‘ನಿಗಮದ ಹಣ ದುರುಪಯೋಗವಾಗಿದೆ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ. ಸೂಕ್ತ ಕಾನೂನು ಕ್ರಮ ಜರುಗಿಸಿ’ ಎಂಬುದಾಗಿ ಕೋರಿದ್ದರು. ದಾಖಲೆ ಪರಿಶೀಲಿಸಿದ್ದ ಪ್ರಭಾವಿ ‘ನಿಗಮದ ಅಧಿಕಾರಿಗಳು ಹಾಗೂ ಬ್ಯಾಂಕ್ ಸಿಬ್ಬಂದಿ ಸೇರಿಕೊಂಡು ಅಕ್ರಮ ಮಾಡಿದ್ದೀರಾ. ನಿಮ್ಮ ತಪ್ಪಿಗೆ ಶಿಕ್ಷೆ ಅನುಭವಿಸಲೇ ಬೇಕು. ಅಕ್ರಮದ ಮಾಹಿತಿಯನ್ನು ಸಂಬಂಧಪಟ್ಟವರಿಗೆ ತಲುಪಿಸುತ್ತೇನೆ’ ಎಂದಿದ್ದರು. ಇದರಿಂದ ಪರುಶುರಾಮ್ ಹಾಗೂ ಚಂದ್ರಶೇಖರ್ ಹೆದರಿದ್ದರು. ಅವರನ್ನು ಹೆದರಿಸಿದ್ದ ಪ್ರಭಾವಿಯನ್ನೂ ವಿಚಾರಣೆ ನಡೆಸಿ ಮಾಹಿತಿ ಪಡೆಯಬೇಕಿದೆ’ ಎಂದು ಮೂಲಗಳು ಹೇಳಿವೆ. ‘ವಿಧಾನಸೌಧದಲ್ಲಿ ಪ್ರಭಾವಿ ಭೇಟಿ ನಂತರ ಚಂದ್ರಶೇಖರ್ ನೊಂದಿದ್ದರು. ಹಣವನ್ನು ಹೇಗಾದರೂ ಮಾಡಿ ಹೊಂದಾಣಿಕೆ ಮಾಡುವಂತೆ ಹಾಗೂ ಸುಳ್ಳು ರಶೀದಿಗಳನ್ನು ಸೃಷ್ಟಿಸಿ ಹಣ ಮಂಜೂರಾತಿ ಮಾಡುವಂತೆ ಚಂದ್ರಶೇಖರ್ ಮೇಲೆ ಒತ್ತಡ ಹೇರಲಾಗಿತ್ತು. ಇದರಿಂದ ಚಂದ್ರಶೇಖರ್ ಅವರು ಮತ್ತಷ್ಟು ಬೇಸತ್ತಿದ್ದರು’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT