ಭಾರಿ ಸಂಖ್ಯೆಯಲ್ಲಿ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಮೂಲ ದೇವರಿಗೆ ಶತರುದ್ರಾಭಿಷೇಕ ಹೋಮ ಹವನಗಳು ನಡೆದವು. ಮಧ್ಯಾಹ್ನ 1 ರಿಂದ 1.30ರವರೆಗೆ ರಥ ಎಳೆಯಲಾಯಿತು. ಬಣ್ಣ ಬಣ್ಣದ ಬಟ್ಟೆ ಹಾಗೂ ಹೂವುಗಳಿಂದ ಅಲಂಕರಿಸಿದ್ದ ತೇರಿನಲ್ಲಿ ಉತ್ಸವ ಮೂರ್ತಿಯನ್ನು ಕೂರಿಸಿ ಎಳೆಯುತ್ತಿದ್ದಂತೆ, ಭಕ್ತರು ಜಯಘೋಷ ಕೂಗಿದರು. ಬಾಳೆಹಣ್ಣು ಎಸೆದು ಹರಕೆ ತೀರಿಸಿದರು.
ಜನಪದ ಕಲಾತಂಡಗಳಿಂದ ಡೊಳ್ಳು ಕುಣಿತ, ವೀರಗಾಸೆ ಪ್ರದರ್ಶನ ನಡೆಯಿತು. ಭಕ್ತರು ಅರವಟ್ಟಿಗೆಗಳನ್ನು ತೆರೆದು ಜಾತ್ರೆಗೆ ಬಂದವರಿಗೆ ನೀರು, ಮಜ್ಜಿಗೆ, ಪಾನಕ, ಹೆಸರುಬೇಳೆ ಹಂಚಿದರು. ಹಲವು ಅರವಟ್ಟಿಗೆಗಳಲ್ಲಿ ಅನ್ನದಾಸೋಹ ಏರ್ಪಡಿಸಲಾಗಿತ್ತು.