ಬೆಂಗಳೂರು: 'ಶಾಸಕ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ವಿವಾಹದ ವೇಳೆ ವಾಹನ ಪಾಸ್ ಗಳನ್ನು ನೀಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡಿದ ಹೇಳಿಕೆಗೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಈ ಕುರಿತಂತೆ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಲೇವಾರಿ ಮಾಡಿದೆ.
ವಿಚಾರಣೆ ವೇಳೆ ಸರ್ಕಾರದ ಪರ ಹೆಚ್ಚುವರಿ ವಕೀಲ ವಿಕ್ರಂ ಹುಯಿಲಗೋಳ ಪ್ರಮಾಣ ಪತ್ರ ಸಲ್ಲಿಸಿದರು. ‘ಕುಟುಂಬದ 100 ಸದಸ್ಯರ ಪಾಲ್ಗೊಳ್ಳುವಿಕೆಗೆ ಕುಮಾರಸ್ವಾಮಿ ಅನುಮತಿ ಕೋರಿದ್ದರು. ಇದನ್ನು ಆಧರಿಸಿ ಅನುಮತಿ ನೀಡಲಾಗಿತ್ತು’ ಎಂದು ತಿಳಿಸಿದರು.
ಪ್ರಮಾಣ ಪತ್ರ ಪರಿಶೀಲಿಸಿದ ನ್ಯಾಯಪೀಠ, ‘ಪ್ರಕರಣ ಕೋರ್ಟ್ ಮೆಟ್ಟಿಲೇರಿದ ನಂತರ ಅನುಮತಿ ಪತ್ರ ಪಡೆದಂತಿದೆ’ ಎಂದು ಮೌಖಿಕವಾಗಿ ಅಸಮಾಧಾನ ಹೊರಹಾಕಿತು.
‘ಕೋರ್ಟ್ ನಿರ್ದೇಶನ ನೀಡಿದರೂ ಸರ್ಕಾರ ಸಮರ್ಪಕ ಮಾಹಿತಿ ನೀಡಿಲ್ಲ. ನೀಡಿರುವ ಮಾಹಿತಿಗಳಲ್ಲೂ ಸಾಕಷ್ಟು ಗೊಂದಲಗಳಿವೆ. ಇದು ಗಂಭೀರ ಲೋಪ. ಲಾಕ್ ಡೌನ್ ನಿಯಮ ಉಲ್ಲಂಘಿಸಿ ತಪ್ಪು ಮಾಡಿರುವ ಅಧಿಕಾರಿಗಳ ನಡೆಯನ್ನು ಸರ್ಕಾರ ಸಮರ್ಥಿಸುವಂತಿದೆ’ ಎಂದು ಹೇಳಿತು.