ಬೆಂಗಳೂರು: ‘ಚರ್ಚೆಗೆ ನಾವು ಸಿದ್ಧರಿದ್ದೇವೆ. ಚಳವಳಿಗಳನ್ನು ಹತ್ತಿಕ್ಕುವುದಿಲ್ಲ. ಆದರೆ ಹಿಂಸಾಚಾರಕ್ಕೆ ನಮ್ಮ ಸರ್ಕಾರ ಅವಕಾಶಕೊಡುವುದಿಲ್ಲ’ ಎಂದು ಸಚಿವ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂವಿಧಾನದ ಪ್ರಕಾರ ಕಾಯ್ದೆ ಆಗೋದು ಬೀದಿ ಜಗಳದಲ್ಲಿ ಅಲ್ಲ. ಸಂಸತ್ತಿನಲ್ಲಿ ವಿಸ್ತೃತ ಚರ್ಚೆಯ ಮೂಲಕ ಕಾಯ್ದೆಗಳು ರೂಪುಗೊಳ್ಳುತ್ತವೆ. ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಭಾರತ ಮಾನವೀಯತೆ ಮೆರೆದಿದೆ’ ಎಂದು ವಿವರಿಸಿದರು.
‘ಈ ದೇಶದ ಯಾವುದೇ ವ್ಯಕ್ತಿಯ ಪೌರತ್ವವನ್ನು ಸರ್ಕಾರ ಕಿತ್ತುಕೊಂಡಿಲ್ಲ. ಭಾರತವನ್ನು ತನ್ನ ನೆಲ ಎಂದು ಆಯ್ಕೆ ಮಾಡಿಕೊಂಡಿರುವವರೆಲ್ಲರೂ ಭಾರತೀಯರೇ ಆಗಿದ್ದಾರೆ, ಆಗಿರುತ್ತಾರೆ’ ಎಂದು ಹೇಳಿದರು.
‘ನಮ್ಮ ರಾಜ್ಯದಲ್ಲಿ ಕೆಲವರು ಪೌರತ್ವ ಕಿತ್ತುಕೊಂಡಿದೆ ಎಂದು ಇಲ್ಲದ ವಿಚಾರ ಮಾತನಾಡಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಯಾರ ಹಕ್ಕನ್ನೂ ನಾವು ಕಿತ್ತುಕೊಂಡಿಲ್ಲ. ಚರ್ಚೆಗೆ ನಾವು ತಯಾರಿದ್ದೇವೆ. ಚಳವಳಿಗಳಿಗೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಆದರೆ ಹಿಂಸಾಚಾರಕ್ಕೆ ಅಲ್ಲ’ ಎಂದು ಸ್ಪಷ್ಟಪಡಿಸಿದರು.