ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದ ಮಹಿಳೆಯೊಬ್ಬರಿಗೆ ದೊಣ್ಣೆಯಿಂದ ಹೊಡೆದು ಚಿನ್ನದ ಮಾಂಗಲ್ಯ ಸರ ಕದ್ದೊಯ್ದಿದ್ದ ಆರೋಪಿ ಪದ್ಮನಾಭ ಅಲಿಯಾಸ್ ಗೂಳಿ ಗುಂಡ (28) ಎಂಬುವವರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
‘ಬನಶಂಕರಿ 2ನೇ ಹಂತದ ಸರಬಂಡೆಪಾಳ್ಯದ ಪದ್ಮನಾಭ, ಅಪರಾಧ ಹಿನ್ನೆಲೆಯುಳ್ಳವ. ಈತನಿಂದ 40 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿ ಭುವನೇಶ್ ಅಲಿಯಾಸ್ ಮೈಕಲ್ ಎಂಬಾತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.
‘ಸ್ಥಳೀಯ ನಿವಾಸಿ ಸುನಂದಾ ಎಂಬುವವರು ಫೆ. 2ರಂದು ಸಂಜೆ ಬನಶಂಕರಿಯ ರಾಘವೇಂದ್ರ ದೇವಸ್ಥಾನ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಎದುರುಗಡೆ ಬಂದಿದ್ದ ಆರೋಪಿಗಳು, ಸುನಂದಾ ಅವರನ್ನು ಅಡ್ಡಗಟ್ಟಿ ದೊಣ್ಣೆಯಿಂದ ಹೊಡೆದಿದ್ದರು. ಚಾಕು ತೋರಿಸಿ ಬೆದರಿಸಿ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು’ ಎಂದು ತಿಳಿಸಿದರು.
‘ಕೃತ್ಯದ ಬಗ್ಗೆ ಸುನಂದಾ ಅವರಿಂದ ದೂರು ಪಡೆದು ಆರೋಪಿ ಯನ್ನು ಬಂಧಿಸಲಾಗಿದೆ. ಗಿರಿನಗರ, ಬಸವನಗುಡಿ, ಚನ್ನಮ್ಮನಕೆರೆ ಅಚ್ಚುಕಟ್ಟು, ಜಯನಗರ ಠಾಣೆ ವ್ಯಾಪ್ತಿಯಲ್ಲೂ ಆರೋಪಿ ಕೃತ್ಯ ಎಸಗಿ ರುವುದು ಗೊತ್ತಾಗಿದೆ’ ಎಂದರು.