ಯಲಹಂಕ: ಕೆಬಿಜಿ ಸ್ವಯಂಸೇವಕರ ಸಂಘ ಹಾಗೂ ರೆಡ್ಕ್ರಾಸ್ ರಕ್ತನಿಧಿ ಆಶ್ರಯದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ 170 ಯುನಿಟ್ ರಕ್ತ ಸಂಗ್ರಹಿಸಲಾಯಿತು.ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಸೇರಿದಂತೆ ಸಾರ್ವಜನಿಕರು ರಕ್ತದಾನ ಮಾಡಿದರು.
ಶಾಸಕ ಕೃಷ್ಣ ಬೈರೇಗೌಡ, ‘ಲಾಕ್ಡೌನ್ನಿಂದಾಗಿ ಹಲವು ರೋಗಿಗಳು ರಕ್ತದ ಕೊರತೆ ಎದುರಿಸುತ್ತಿದ್ದಾರೆ. ರಕ್ತಭಂಡಾರಗಳಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ರಕ್ತದ ಸಂಗ್ರಹವಿಲ್ಲ.ಈ ಹಿಂದಿನ ರಕ್ತದಾನಕ್ಕೆ ಹೋಲಿಸಿದರೆ ಈಗ ಕೇವಲ ಶೇ 20ರಷ್ಟು ಮಾತ್ರ ರಕ್ತದಾನ ಆಗುತ್ತಿದೆ’ ಎಂದರು.
‘ಮಧುಮೇಹ, ಅನಿಮಿಯಾ ರೋಗಿಗಳು, ಅಪಘಾತದ ಸಂದರ್ಭಗಳಲ್ಲಿ ರೋಗಿಗಳಿಗೆ ರಕ್ತ ಒದಗಿಸಲು ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಿಬಿರಗಳನ್ನು ಏರ್ಪಡಿಸಲಾಗುತ್ತಿದ್ದು,ಆರೋಗ್ಯವಂತರು ಇಂತಹ ಕಷ್ಟಕಾಲದಲ್ಲಿ ರಕ್ತದಾನ ಮಾಡಲು ಮುಂದಾಗಬೇಕು’ ಎಂದು ಮನವಿ ಮಾಡಿದರು.