ಬೆಂಗಳೂರು: `ಜೀವನದ ಕೊನೆಯ ಉಸಿರಿರುವವರೆಗೂ ಕನ್ನಡ ನಾಡು, ನುಡಿಗಾಗಿ ದುಡಿಯಲು ರಾಜ್ಕುಮಾರ್ ಕುಟುಂಬ ಸಿದ್ಧವಿದೆ~ ಎಂದು ಚಲನಚಿತ್ರ ನಟ ಶಿವರಾಜ್ ಕುಮಾರ್ ಹೇಳಿದರು.
ಕನ್ನಡ ಅಭಿಮಾನಿ ಬಳಗ ನಗರದ ಜಯನಗರ 9 ನೇ ಹಂತದಲ್ಲಿ ನೂತನವಾಗಿ ನಿರ್ಮಿಸಿರುವ ಡಾ. ರಾಜ್ ಕುಮಾರ್ ಅವರ ಪ್ರತಿಮೆ ಅನಾವರಣ ನೆರವೇರಿಸಿ ಮಾತನಾಡಿದ ಅವರು, `ಅಭಿಮಾನಿಗಳ ಪ್ರೀತಿ ಹಾಗೂ ವಿಶ್ವಾಸಗಳಿಂದ ಬೆಳೆದಿರುವ ರಾಜ್ ಕುಮಾರ್ ಕುಟುಂಬ ನಾಡಿಗಾಗಿ ದುಡಿಯಲು ಸಿದ್ಧವಿರುತ್ತದೆ. ಅಭಿಮಾನ ನೀಡಿದ ಜನತೆಯ ನೆಲದ ಋಣ ನಮ್ಮ ಕುಟುಂಬಕ್ಕಿದೆ~ ಎಂದು ನುಡಿದರು.
`ಕನ್ನಡಿಗರು ಹೆಚ್ಚು ಹೆಚ್ಚು ಕನ್ನಡ ಚಿತ್ರಗಳನ್ನು ವೀಕ್ಷಿಸುವ ಮೂಲಕ ಕನ್ನಡ ಚಿತ್ರರಂಗ ಮತ್ತು ಕಲಾವಿದರನ್ನು ಬೆಳೆಸಬೇಕು. ಅಭಿಮಾನಿಗಳ ಪ್ರೀತಿ, ವಿಶ್ವಾಸ ಕನ್ನಡ ಚಿತ್ರರಂಗದ ಎಲ್ಲರ ಮೇಲೂ ಇರಬೇಕು~ ಎಂದು ಅವರು ಮನವಿ ಮಾಡಿದರು.
ನಟಿ ತಾರಾ ಮಾತನಾಡಿ, `ರಾಜ್ ಕುಮಾರ್ ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ಇಂದು ನಮ್ಮ ಜೊತೆಗೆ ಇಲ್ಲದಿದ್ದರೂ ಅವರು ಎಲ್ಲ ಕನ್ನಡಿಗರ ಮನದಲ್ಲಿಯೂ ನೆಲೆಸಿದ್ದಾರೆ. ರಾಜ್ಯದ ಎಲ್ಲ ಕಡೆಯೂ ಅವರ ಪುತ್ಥಳಿಗಳ ನಿರ್ಮಾಣವಾಗಬೇಕು~ ಎಂದು ಅವರು ಆಶಿಸಿದರು.
`ಕಲಾವಿದರು ಅಭಿನಯದಲ್ಲಿ ನಿರಂತರವಾಗಿ ತೊಡಗುವುದರಿಂದ ಸಮಾಜ ಸೇವೆಗೆ ಹೆಚ್ಚು ಸಮಯ ನೀಡುವುದು ಕಷ್ಟ. ಆದರೆ ಇದನ್ನೂ ಮೀರಿ ಅಭಿಮಾನಿಗಳನ್ನು ಭೇಟಿಯಾಗುವ ಅವಕಾಶಗಳು ಸಿಕ್ಕಾಗ ಹೆಚ್ಚು ಸಂತೋಷವಾಗುತ್ತದೆ. ಇದೇ ಕಲಾವಿದರ ಸಾರ್ಥಕತೆ~ ಎಂದು ನುಡಿದರು.
ಸಮಾರಂಭದಲ್ಲಿ ಜಯನಗರ ಶಾಸಕ ಬಿ.ಎನ್.ವಿಜಯ್ ಕುಮಾರ್, ಬಿಬಿಎಂಪಿ ಸದಸ್ಯರಾದ ಬಿ.ಸೋಮಶೇಖರ್, ಮುನಿ ಸಂಜೀವಯ್ಯ ಮತ್ತಿತರರು ಇದ್ದರು.