ಬೆಂಗಳೂರು: ಮಾರುಕಟ್ಟೆ, ಹಣಕಾಸು, ಬ್ಯಾಂಕಿಂಗ್, ಕೈಗಾರಿಕೆ, ಸೇವಾ ವಲಯದಲ್ಲಿ ಉದ್ಯೋಗಾವಕಾಶಗಳು ಹೇರಳವಾಗಿರುವುದರಿಂದ ನಗರದ ಬಹುತೇಕ ಕಾಲೇಜುಗಳಲ್ಲಿ ಬಿ.ಕಾಂ. ಪ್ರವೇಶಕ್ಕೆ ವಿದ್ಯಾರ್ಥಿಗಳು ಮುಗಿಬಿದ್ದಿದ್ದಾರೆ.
‘ಬಿ.ಕಾಂ. ವೃತ್ತಿ ಆಧಾರಿತ ಕೋರ್ಸ್ ಎಂಬ ಪರಿಕಲ್ಪನೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಬಂದಿದೆ. ಬಿ.ಕಾಂ. ಮುಗಿಸಿದ ತಕ್ಷಣ ಕಂಪೆನಿಗಳಲ್ಲಿ ಕೆಲಸ ಸಿಗುತ್ತಿದೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಈ ಪದವಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಬಸವನಗುಡಿಯಲ್ಲಿರುವ ವಿಜಯ ಪದವಿ ಕಾಲೇಜಿನ ಪ್ರಾಂಶುಪಾಲೆ (ಉಸ್ತುವಾರಿ) ಡಾ.ಬಿ.ಎಸ್. ಜಯಶ್ರೀ ತಿಳಿಸಿದರು.
‘ನಮ್ಮ ಕಾಲೇಜಿನಲ್ಲಿ ಬಿ.ಕಾಂ.ನಲ್ಲಿ 480 ಸೀಟುಗಳಿವೆ. ಆದರೆ, 2,000ಕ್ಕೂ ಹೆಚ್ಚು ಅರ್ಜಿಗಳು ಬರುತ್ತವೆ. ಮೊದಲು ಬಂದ ಹಾಗೂ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಾಗುತ್ತದೆ’ ಎಂದು ಹೇಳಿದರು.
ಜಯನಗರದಲ್ಲಿರುವ ವಿಜಯ ಪದವಿ ಕಾಲೇಜಿನಲ್ಲೂ ವಿಜ್ಞಾನಕ್ಕಿಂತ ವಾಣಿಜ್ಯ ಪದವಿಗೆ ಹೆಚ್ಚಿನ ಬೇಡಿಕೆ ಇದೆ.
‘ಉದ್ಯೋಗಾವಕಾಶ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಇರುವವರು ಬಿ.ಕಾಂ. ಆಯ್ಕೆ ಮಾಡಿಕೊಳ್ಳುತ್ತಾರೆ. ನಗರದ ಬಹುತೇಕ ಕಾಲೇಜುಗಳಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ಕ್ಕೆ ತರಗತಿಗಳು ಮುಗಿಯುತ್ತವೆ. ವಿಜ್ಞಾನ ಪದವಿಯಾದರೆ, ತರಗತಿ ಮುಗಿದ ಬಳಿಕ ಪ್ರಾಯೋಗಿಕ ತರಗತಿಗಳು ಇರುತ್ತವೆ. ಸಂಜೆಯವರೆಗೂ ಕಾಲೇಜಿನಲ್ಲೇ ಕಾಲ ಕಳೆಯಬೇಕು. ಇದು ಕೆಲವರಿಗೆ ಇಷ್ಟವಾಗುವುದಿಲ್ಲ’ ಎಂದು ಪ್ರಾಂಶುಪಾಲೆ ಪ್ರೊ.ಡಿ.ಆರ್.ಸುಧಾ ತಿಳಿಸಿದರು.
‘ಮಧ್ಯಾಹ್ನದ ಬಳಿಕ ಸಮಯ ಸಿಗುವುದರಿಂದ ಕೆಲ ವಿದ್ಯಾರ್ಥಿಗಳು ನಾಟಕ, ನೃತ್ಯ, ಸಂಗೀತ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಮತ್ತೆ ಕೆಲವರು ಸಿ.ಎ–ಸಿ.ಪಿ.ಟಿ, ಬ್ಯಾಂಕಿಂಗ್ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ’ ಎಂದರು.
ಕಮ್ಯುನಿಟಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನ ಪ್ಲೇಸ್ಮೆಂಟ್ ಅಧಿಕಾರಿ ದೀಪ್ತಿ ಅಶೋಕ್ ಮಾತನಾಡಿ, ‘ಎಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ ಹಾಗೂ ಮೂಲ ವಿಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ. ಸಂಶೋಧನಾ ಪ್ರವೃತ್ತಿ ಇರುವಂತಹವರು ಮೂಲ ವಿಜ್ಞಾನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಬೇಗ ಉದ್ಯೋಗಕ್ಕೆ ಸೇರಿ ಕುಟುಂಬದ ಜವಾಬ್ದಾರಿಯನ್ನು ಹೊರಬೇಕು ಎನ್ನುವವರು ಬಿ.ಕಾಂ.ಗೆ ಸೇರುತ್ತಾರೆ’ ಎಂದು ಹೇಳಿದರು.
‘ಜೀವನದಲ್ಲಿ ಸುಸ್ಥಿರವಾಗಿ ನೆಲೆ ನಿಲ್ಲಬೇಕೆಂದರೆ ಉದ್ಯೋಗ ಅತಿ ಅವಶ್ಯ. ಈ ಹಿಂದೆ ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರಗಳಿಗೆ ಹೆಚ್ಚು ಬೇಡಿಕೆ ಇತ್ತು. ಆದರೆ, ಈಗ ಬ್ಯಾಂಕಿಂಗ್, ಮಾರುಕಟ್ಟೆ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಹೀಗಾಗಿ ನಾನು ವಾಣಿಜ್ಯ ಪದವಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಮಹೇಶ್ ತಿಳಿಸಿದರು.
**
ಕಾನೂನು ಕೋರ್ಸ್ಗೆ ಅರ್ಜಿ ಆಹ್ವಾನ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು ವತಿಯಿಂದ 2017–18ನೇ ಸಾಲಿನ ಐದು ವರ್ಷದ ಬಿಎ, ಎಲ್.ಎಲ್.ಬಿ ಕೋರ್ಸ್ಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಬೆಂಗಳೂರು ವಿಶ್ವವಿದ್ಯಾಲಯದ www.ulc.bangalore.com ಹಾಗೂ www. bangalore university.ac.in ವೆಬ್ಸೈಟ್ನಲ್ಲಿ ಅರ್ಜಿ ಪಡೆಯಬಹುದು. ಅರ್ಜಿ ಸಲ್ಲಿಕೆಗೆ ಜೂನ್ 24 ಕೊನೆಯ ದಿನ.
ಸ್ಥಳ: ಪ್ರಾಂಶುಪಾಲರು, ವಿಶ್ವವಿದ್ಯಾಲಯ ಕಾನೂನು ಕಾಲೇಜು, ಜ್ಞಾನಭಾರತಿ ಆವರಣ.
**
ಇಂಟಿಗ್ರೇಟೆಡ್ ಕೋರ್ಸ್ಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ಐದು ವರ್ಷಗಳ ಇಂಟೆಗ್ರೇಟೆಡ್ ಕೋರ್ಸ್ಗಳಿಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೇ 50 ರಷ್ಟು ಹಾಗೂ ಎಸ್.ಸಿ/ಎಸ್.ಟಿ, ಪ್ರವರ್ಗ 1ರ ವಿದ್ಯಾರ್ಥಿಗಳು ಶೇ 45 ರಷ್ಟು ಅಂಕ ಪಡೆದಿರಬೇಕು.
ಅರ್ಜಿ ಸಲ್ಲಿಕೆಗೆ ಜೂನ್ 24 ಕೊನೆಯ ದಿನಾಂಕ.
ಸಂಪರ್ಕ: 8022961923
**
ಈ ವರ್ಷದಿಂದ ಸಿ.ಎ ತರಬೇತಿ
‘ಬಿ.ಕಾಂ. ಸೇರುವ ಬಹಳಷ್ಟು ವಿದ್ಯಾರ್ಥಿಗಳು ಸಿ.ಎ. ತರಬೇತಿ ಪಡೆಯಲು ಬಯಸುತ್ತಾರೆ. ನಮ್ಮ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲು ಈ ಶೈಕ್ಷಣಿಕ ವರ್ಷದಿಂದ ಸಿ.ಎ ತರಬೇತಿ ನಡೆಸಲು ನಿರ್ಧರಿಸಿದ್ದೇವೆ’ ಎಂದು ಪಿಇಎಸ್ ಪದವಿ ಕಾಲೇಜಿನ ಪ್ರಾಂಶುಪಾಲರು ಎ.ವಿ. ಚಂದ್ರಶೇಖರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.