ಬೆಂಗಳೂರು: ಪ್ರದೇಶ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ನಾಲ್ಕನೆಯ ಸ್ಥಾನ ಪಡೆದಿರುವ ರಾಜು ಕುನ್ನೂರು ಅವರ ಮೇಲಿರುವ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಪ್ರಕರಣ ಇತ್ಯರ್ಥವಾಗದ ಕಾರಣ ಪದಾಧಿಕಾರಿಗಳ ಪಟ್ಟಿ ಅಧಿಕೃತವಾಗಿ ಬಿಡುಗಡೆ ಆಗಿಲ್ಲ.
ಚುನಾವಣೆಯಲ್ಲಿ ರಾಜು ಕುನ್ನೂರು ಅವರು 1,425 ಮತ ಡೆದಿದ್ದಾರೆ. ಅವರು ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಬೇಕಿತ್ತು. ಆದರೆ ಅವರು ಯುವ ಕಾಂಗ್ರೆಸ್ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬ ದೂರು ವಿಚಾರಣೆಯ ಹಂತದಲ್ಲಿರುವ ಕಾರಣ ಅವರ ಆಯ್ಕೆಯನ್ನು ತಡೆಹಿಡಿಯಲಾಗಿದೆ.
ಮಾಜಿ ಮುಖ್ಯ ಚುನಾವಣಾಧಿಕಾರಿ ಜೆ.ಎಂ. ಲಿಂಗ್ಡೊ ಅವರ `ಫೇಮ್~ (ಚುನಾವಣೆ ನಿರ್ವಹಣಾ ಪ್ರತಿಷ್ಠಾನ) ಸಂಸ್ಥೆ ಈ ದೂರಿನ ಕುರಿತು ವಿಚಾರಣೆ ನಡೆಸುತ್ತಿದೆ. ಯುವ ಕಾಂಗ್ರೆಸ್ ಚುನಾವಣಾ ಪ್ರಕ್ರಿಯೆಯ ಉಸ್ತುವಾರಿಯನ್ನೂ ಇದೇ ಸಂಸ್ಥೆ ವಹಿಸಿಕೊಂಡಿದೆ. ರಾಜು ಅವರ ಮೇಲಿನ ದೂರು ಸೋಮವಾರ ಇತ್ಯರ್ಥವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.