ಬೆಂಗಳೂರು: `ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಸಂಸತ್ತು ಹಾಗೂ ದೇಶದ ಎಲ್ಲಾ ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರಬೇಕು~ ಎಂದು ಕರ್ನಾಟಕ ಪಂಚಾಯತ್ ಪರಿಷತ್ ಖಜಾಂಚಿ ಎಂ.ಯಲ್ಲಪ್ಪ ಒತ್ತಾಯಿಸಿದರು.
ಪರಿಷತ್ತು ಹಾಗೂ ಬೃಹತ್ ಬೆಂಗಳೂರು ನಗರ ಜಿಲ್ಲಾ ಪರಿಷತ್ತಿನ ಮಹಿಳಾ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಹಾಸಭೆಯಲ್ಲಿ ಅವರು ಮಾತನಾಡಿದರು.
`ಪ್ರಸ್ತುತ ಕೇವಲ ಬೆರಳೆಣಿಕೆಯಷ್ಟು ಮಹಿಳಾ ಸದಸ್ಯರು ಮಾತ್ರ ಲೋಕಸಭೆಯಲ್ಲಿದ್ದಾರೆ. ಮೀಸಲಾತಿ ಅಸ್ತಿತ್ವಕ್ಕೆ ಬಂದರೆ ನೂರಾರು ಮಹಿಳೆಯರು ಜನಪ್ರತಿನಿಧಿಗಳಾಗಬಹುದು. ದೇಶದ ವಿಧಾನ ಮಂಡಲಗಳಲ್ಲಿ ಕೂಡ ಈ ಮೀಸಲಾತಿ ಜಾರಿಯಾಗಬೇಕು~ ಎಂದರು.
`ಸುಮಾರು 11 ಲಕ್ಷ ಕೋಟಿ ಕಪ್ಪು ಹಣ ಹೊರ ದೇಶಗಳಲ್ಲಿದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಪ್ರಾಮಾಣಿಕತೆ ಹೆಚ್ಚಿನ ಪ್ರಮಾಣದಲ್ಲಿದೆ. ಭ್ರಷ್ಟಾಚಾರ ಹೋಗಲಾಡಿಸಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರ ಪಡೆಯಬೇಕು~ ಎಂದು ಹೇಳಿದರು.
ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಲ್.ಗೋಪಾಲಕೃಷ್ಣಗೌಡ ಮಾತನಾಡುತ್ತಾ `ಪುರುಷರ ಸಹಾಯ ಬಯಸದೇ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ದುಡಿದಾಗ ಅವರಿಗೆ ಸ್ವಂತಿಕೆ, ಅನುಭವ ಹೆಚ್ಚುತ್ತದೆ. ಗ್ರಾಮ ಮಟ್ಟದ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಪೂರ್ಣ ಅವಲಂಬಿತರಾಗದೆ ಸ್ವಂತ ನಿರ್ಧಾರಗಳನ್ನು ತಗೆದುಕೊಳ್ಳಬೇಕು~ ಎಂದರು.
ಕರ್ನಾಟಕ ರೈತ ಅಭಿವೃದ್ಧಿ ಸಂಸ್ಥೆ ಉಪಾಧ್ಯಕ್ಷ ಸಯ್ಯದ್ ನಜೀರ್, `ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳಿಲ್ಲದೇ ಮಹಿಳೆಯರು ತೊಂದರೆ ಅನುಭವಿಸುತ್ತಾರೆ. ಯೋಜನೆಗಳ ಮೇಲೆ ಯೋಜನೆ ರೂಪಿಸುವ ಸರ್ಕಾರ ಮೂಲ ಸೌಕರ್ಯ ಒದಗಿಸಲು ಹಿಂದೇಟು ಹಾಕುವುದು ವಿಪರ್ಯಾಸದ ಸಂಗತಿ~ ಎಂದರು.
ಪರಿಷತ್ತಿನ ಪೋಷಕ ಬಿ. ಜಗದೀಶ್ ಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಡಾ.ವಿ.ಎನ್.ಹೆಗಡೆ, ಮುಖ್ಯ ಪೋಷಕಿ ಗಿರಿಜಾ ದೀಕ್ಷಿತ್, ನಗರ ಜಿಲ್ಲಾ ಪರಿಷತ್ತಿನ ಮಹಿಳಾ ವಿಭಾಗದ ಉಪಾಧ್ಯಕ್ಷರಾದ ನರಸಮ್ಮ, ಮೈತ್ರೇಯ, ಎಂ.ಭಾಗ್ಯದೇವಿ, ಕಾರ್ಯದರ್ಶಿ ಭಾಗ್ಯ ಆರ್. ಗೌಡ ುತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.