ಮಹದೇವಪುರ: ಇಲ್ಲಿನ ಮಾರತ್ಹಳ್ಳಿ ರಿಂಗ್ರಸ್ತೆಯಲ್ಲಿ ಶುಕ್ರವಾರ ರಸ್ತೆ ಬದಿಯಲ್ಲಿ ಬಿಬಿಎಂಪಿ ಕಸದ ಲಾರಿಗಳು ಸುರಿದ ಕಸದ ರಾಶಿಗೆ ಬೆಂಕಿ ಹಚ್ಚಲಾಗಿತ್ತು. ಸಂಜೆಯವರೆಗೆ ಉರಿಯುತ್ತಲೇ ಇದ್ದ ಕಸದ ರಾಶಿಯಿಂದ ದಟ್ಟ ಹೊಗೆ ಹೊರಬರುತ್ತಿತ್ತು.
ಮಾರತ್ಹಳ್ಳಿಯಿಂದ ಸಿಲ್ಕ್ಬೋರ್ಡ್ ಕಡೆಗೆ ಹೋಗುವ ರಿಂಗ್ ರಸ್ತೆಯ ಎಡಭಾಗದಲ್ಲಿ ರಾಶಿ ರಾಶಿ ಕಸವನ್ನು ಸುರಿಯಲಾಗಿದ್ದು, ದೊಡ್ಡನೆಕ್ಕುಂದಿ, ವರ್ತೂರು ಹಾಗೂ ಮಾರತ್ಹಳ್ಳಿ ವಾರ್ಡ್ನಲ್ಲಿನ ಕಸವನ್ನು ದಿನವೂ ತಂದು ಸುರಿಯಲಾಗುತ್ತಿದೆ. ಪಕ್ಕದಲ್ಲಿಯೇ ಹರಿಯುವ ಕೆರೆಯ ನೀರಿಗೂ ಕಸ ಚೆಲ್ಲಲಾಗುತ್ತಿದೆ. ಇದರಿಂದಾಗಿ ದುರ್ನಾತ ಹೊರಬರುತ್ತಿದೆ. ರಸ್ತೆ ಬದಿಮೂಗು ಮುಚ್ಚಿಕೊಂಡು ದಿನಗಳನ್ನು ಕಳೆಯುವಂತಾಗಿದೆ.
ಮಂಡೂರಿಗೆ ಕಸವನ್ನು ಸುರಿಯುವುದನ್ನು ನಿಲ್ಲಿಸಲಾಗುತ್ತಿದೆ. ಇಲ್ಲಿ ರಸ್ತೆಬದಿಯಲ್ಲಿ ದಿನವೂ ಬೆಳಗಾಗುತ್ತಲೇ ಕಸದ ರಾಶಿ ಬಂದು ಬೀಳುತ್ತಿದೆ. ಅಲ್ಲದೆ ಕಸದ ರಾಶಿಗೆ ಬೆಂಕಿ ಹಚ್ಚಲಾಗುತ್ತಿದೆ. ಹೆಚ್ಚಾಗಿ ಪ್ಲಾಸ್ಟಿಕ್ ಕಸದ ಸುಟ್ಟ ವಾಸನೆ ಬರುತ್ತದೆ. ಹೀಗಾಗಿ ರಸ್ತೆಯಲ್ಲಿ ಸಂಚರಿಸುವುದೇ ಹಿಂಸೆ ಎಂದು ಸ್ಥಳೀಯ ಮುನ್ನೆಕೊಳ್ಳಾಲದ ನಿವಾಸಿ ಡಿ.ಸುರೇಶ ದೂರಿದರು.
ಈ ಬಗ್ಗೆ ಬಿಬಿಎಂಪಿಗೆ ದೂರು ಸಲ್ಲಿಸಿದರೆ, ಈ ಗ್ರಾಮದಲ್ಲಿ ಸಂಗ್ರಹಗೊಳ್ಳುವ ಕಸವನ್ನು ಇಲ್ಲಿ ಅನಿವಾರ್ಯವಾಗಿ ಸುರಿಯಲಾಗುತ್ತಿದೆ. ಕಸವನ್ನು ವಿಂಗಡಿಸಲು ವಾರ್ಡ್ನಲ್ಲಿ ಸ್ಥಳ ಗೊತ್ತುಪಡಿಸಿದ ಮೇಲೆ ಇಲ್ಲಿ ಕಸ ಸುರಿಯುವುದನ್ನು ನಿಲ್ಲಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.