ಭಾಲ್ಕಿ: ‘ವಿದ್ಯಾರ್ಥಿಗಳಿಗೆ ಗುಣಾತ್ಮಕ, ಸಂಸ್ಕಾರಯುತ ಶಿಕ್ಷಣ ನೀಡಿ ರಾಷ್ಟ್ರದ ಸತ್ಪ್ರಜೆಗಳನ್ನಾಗಿಸುವಲ್ಲಿ ಗುರುಕುಲ ಶಿಕ್ಷಣ ಸಮುಚ್ಛಯ ಅಗಾಧ ಪಾತ್ರ ವಹಿಸುತ್ತಿದೆ’ ಎಂದು ಬಸವಕಲ್ಯಾಣದ ಶಾಸಕ ಶರಣು ಸಲಗರ ಹೇಳಿದರು.
ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನಲ್ಲಿ 2021-22ನೇ ಸಾಲಿನ ಪ್ರಥಮ ಪಿಯು ವಿದ್ಯಾರ್ಥಿಗಳ ₹1 ಕೋಟಿ ಮೌಲ್ಯದ ವಿದ್ಯಾರ್ಥಿ ವೇತನದ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಗುರುಕುಲ ಶಾಲೆ, ಕಾಲೇಜು ಸ್ಥಾಪನೆ ಮಾಡುವುದರ ಮೂಲಕ ಬಸವಲಿಂಗ ಪಟ್ಟದ್ದೇವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ’ ಎಂದರು.
ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ವಿದ್ಯಾರ್ಥಿ ಜೀವನದಲ್ಲಿ ಪಿಯು ಹಂತ ಮಹತ್ವದ ಘಟ್ಟವಾಗಿದೆ. ಹಾಗಾಗಿ, ಪೋಷಕರು ಮಾನವೀಯ ಮೌಲ್ಯಗಳೊಂದಿಗೆ, ಗುಣಾತ್ಮಕ, ಕ್ರಿಯಾತ್ಮಕ, ಸಂಶೋಧನಾತ್ಮಕ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಪ್ರವೇಶ ಕೊಡಿಸಬೇಕು’ ಎಂದರು.
ಪ್ರಾಚಾರ್ಯ ಬಸವರಾಜ ಮೊಳಕೀರೆ ಮಾತನಾಡಿ, ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಅರ್ಹ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲು ಕೋವಿಡ್ ನಿಯಮ ಪಾಲನೆಯೊಂದಿಗೆ ಜುಲೈ 24ರಂದು ಗುರುಕುಲದಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತಿದ್ದು, ಹತ್ತನೇ ವರ್ಗದ ಎಲ್ಲ ವಿದ್ಯಾರ್ಥಿಗಳು ಈ ಸುವರ್ಣಾವಕಾಶ ಲಾಭ ಪಡೆದುಕೊಳ್ಳಬೇಕು’ ಎಂದರು.
ಇದೇ ಸಂದರ್ಭದಲ್ಲಿ ಎನ್ಡಿಎ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಾದ ತಿಲಕ್ ಮತ್ತು ನಾಗರಾಜ್ ಅವರಿಗೆ ಶಾಸಕ ಶರಣು ಸಲಗರ ಅವರು ವೈಯಕ್ತಿಕವಾಗಿ ತಲಾ ₹50 ಸಾವಿರ ಚೆಕ್ ನೀಡಿದರು.
ಹಾಸ್ಯ ಕಲಾವಿದ ನವಲಿಂಗ ಪಾಟೀಲ, ಶಾಂತಯ್ಯ ಸ್ವಾಮಿ, ಲಿಂಗರಾಜ ಶಾಶೆಟ್ಟೆ, ಸದಾನಂದ ಪಾಟೀಲ, ರತಿಕಾಂತ ಕೊಹಿನೂರ್, ಸಿದ್ರಾಮೇಶ ಬಿರಾದರ, ಗುತ್ತಿಗೆದಾರ ಅಶೋಕ ಪಾಟೀಲ, ಇದ್ದರು. ಆಡಳಿತಾ ಧಿಕಾರಿ ಮೋಹನರೆಡ್ಡಿ ಸ್ವಾಗತಿಸಿದರು.
ಲಿಖಿತ ಪರೀಕ್ಷೆ ಇಂದು
ಭಾಲ್ಕಿ: ಇಲ್ಲಿನ ಚನ್ನಬಸವೇಶ್ವರ ಗುರುಕುಲದಲ್ಲಿ ಜುಲೈ 24ರಂದು ಬೆಳಿಗ್ಗೆ 11ಕ್ಕೆ ವಿದ್ಯಾರ್ಥಿವೇತನ ಯೋಜನೆಯ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.
ಸಿಬಿಎಸ್ಇ/ಐಸಿಎಸ್ಇ ಪಾಸಾದ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆ ಬರೆಯ ಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳು ಶನಿವಾರ ಬೆಳಗ್ಗೆ 9.30ಕ್ಕೆ ಕ್ಯಾಂಪಸ್ನಲ್ಲಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 7353304502 ಅಥವಾ 8147740402 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.