ಬೀದರ್: ಪಾಲಕರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು ಎಂದು ನೆರೆಯ ತೆಲಂಗಾಣದ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಆಶ್ರಮದ ಪೀಠಾಧಿಪತಿ ಬಸವಲಿಂಗ ಅವಧೂತರು ಹೇಳಿದರು.
ಔರಾದ್ ತಾಲ್ಲೂಕಿನ ಕೌಡಗಾಂವ ಗ್ರಾಮದಲ್ಲಿ ನಡೆದ ಹನುಮಾನ ಮಂದಿರ ಭಜನೆ ಸಮಾರೋಪ ಹಾಗೂ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದ್ದನ್ನು ತಿಳಿಸಬೇಕು. ಸರಿಯಾದ ಮಾರ್ಗದಲ್ಲಿ ನಡೆಯಲು ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.
ಮಕ್ಕಳು ಮೊಬೈಲ್ನಿಂದ ಆದಷ್ಟು ದೂರ ಇರಬೇಕು. ಸಂವಹನ ಹಾಗೂ ಜ್ಞಾನವೃದ್ಧಿಗೆ ಮಾತ್ರ ಮೊಬೈಲ್ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಗುರು, ಹಿರಿಯರನ್ನು ಗೌರವಿಸಬೇಕು. ಜನ್ಮಕೊಟ್ಟ ತಂದೆ-ತಾಯಿಯ ಸೇವೆ ಮಾಡಬೇಕು. ಯಾರೊಂದಿಗೂ ವೈಷಮ್ಯ ಬೆಳೆಸಿಕೊಳ್ಳಬಾರದು. ಪರಸ್ಪರ ಪ್ರೀತಿಯಿಂದ ಬಾಳಬೇಕು ಎಂದು ಸಲಹೆ ಮಾಡಿದರು.
ಸಂಸಾರದಲ್ಲಿ ಇದ್ದುಕೊಂಡೇ ಪಾರಮಾರ್ಥವನ್ನು ಗೆಲ್ಲಬೇಕು. ನಾವು ಎಲ್ಲಿಂದ ಬಂದಿದ್ದೇವೆ. ಎಲ್ಲಿಗೆ ಹೋಗಲಿದ್ದೇವೆ ಎಂಬುದ್ದನ್ನು ಅರ್ಥ ಮಾಡಿಕೊಳ್ಳಬೇಕು. ಗಳಿಸಿದ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಲಿದ್ದೇವೆ. ಸತ್ಕಾರ್ಯಗಳ ಪುಣ್ಯ ಮಾತ್ರ ನಮ್ಮೊಂದಿಗೆ ಬರಲಿದೆ ಎಂದು ಹೇಳಿದರು.
ಜೀವನದಲ್ಲಿ ನೆಮ್ಮದಿಯೇ ಅತಿ ದೊಡ್ಡ ಸಂಪತ್ತು. ಹೀಗಾಗಿ ಬಡತನವೇ ಇರಲಿ, ಸಿರಿತನವೇ ಇರಲಿ ಸಂತೃಪ್ತಿಯಿಂದ ಬದುಕಬೇಕು. ಕಷ್ಟದಲ್ಲಿ ಇರುವವರಿಗೆ ಕೈಲಾದ ಸಹಾಯ ಮಾಡಬೇಕು ಅಲ್ಲದೇ ನಾವು ಚೆನ್ನಾಗಿದರೆ ಎಲ್ಲರೂ ನಮ್ಮ ಹತ್ತಿರ ಬರುತ್ತಾರೆ ನಾವು ಕೆಟ್ಟರೆ ಯಾರು ಕೂಡಾ ನಮ್ಮ ಹತ್ತಿರ ಬರುವುದಿಲ್ಲ ಎಂದು ತಿಳಿಸಿದರು.
ಇದಕ್ಕೂ ಮುನ್ನ ಗ್ರಾಮದ ಬಸ್ ನಿಲ್ದಾಣದಿಂದ ಶ್ರೀಗಳನ್ನು ಮೆರವಣಿಗೆ ಮೂಲಕ ಹನುಮಾನ ಮಂದಿರಕ್ಕೆ ಕರೆತರಲಾಯಿತು.