ಬಸವಕಲ್ಯಾಣ: ಕೋವಿಡ್ ಸೋಂಕು ನಿವಾರಣೆಗೆ ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ₹25 ಸಾವಿರ ಪ್ರೋತ್ಸಾಹ ಧನ, ಬಸ್ಪಾಸ್ ಹಾಗೂ ಊಟದ ವ್ಯವಸ್ಥೆ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಸೋಮವಾರ ಇಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಳಿಕ ತಹಶೀಲ್ದಾರ್ ಸಾವಿತ್ರಿ ಸಲಗರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಕಾರ್ಯಕರ್ತೆಯರು ಕೋವಿಡ್ ವಾರಿಯರ್ಸ್ ಆಗಿರುವುದರಿಂದ ₹50 ಲಕ್ಷ ವಿಮಾ ಸೌಲಭ್ಯ ಒದಗಿಸಬೇಕು. ಸೋಂಕು ದೃಢಪಟ್ಟ ಕುಟುಂಬಗಳಿಗೂ ಸೌಲಭ್ಯ ವಿಸ್ತರಿಸಬೇಕು. ಗೌರವಧನ ಸರಿಯಾಗಿ ಪಾವತಿಸಬೇಕು. ಮೊಟ್ಟೆ ಬಿಲ್, ಅಡುಗೆ ಅನಿಲದ ಬಿಲ್ ಹಾಗೂ ಅರಿಯರ್ಸ್ ನಿಗದಿತ ಸಮಯಕ್ಕೆ ಒದಗಿಸಬೇಕು ಎಂದು ಆಗ್ರಹಿಸಲಾಯಿತು.
ಶ್ರೀದೇವಿ ಚಿವಡೆ, ಕವಿತಾ, ಮಹಾದೇವಿ, ಸುನಂದಾ, ಸುವರ್ಣಾ, ನಾಗಮ್ಮ ಹಾಗೂ ಪುಷ್ಪಾ ಇದ್ದರು.