ಬಸವಕಲ್ಯಾಣ (ಬೀದರ್): ವಿಶ್ವ ಬಸವಧರ್ಮ ಟ್ರಸ್ಟ್ನಿಂದ ಪಟ್ಟಣದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ಅನುಭವ ಮಂಟಪ ಉತ್ಸವ’ಕ್ಕೆ ಶನಿವಾರ (ನ. 25) ಚಾಲನೆ ದೊರೆಯಲಿದೆ.
ಎರಡು ದಿನಗಳ ಉತ್ಸವದಲ್ಲಿ ರಾಜ್ಯ ಸೇರಿದಂತೆ ತೆಲಂಗಾಣ, ಮಹಾರಾಷ್ಟ್ರದ ವಿವಿಧ ಮಠಾಧೀಶರು, ಬಸವತತ್ವ ಚಿಂತಕರು, ಬಸವಭಕ್ತರು ಪಾಲ್ಗೊಳ್ಳಲಿದ್ದಾರೆ. ‘ಲಿಂಗಾಯತ ಸ್ವತಂತ್ರ ಧರ್ಮ; ಸಮಸ್ಯೆ–ಸವಾಲು ಮತ್ತು ಪರಿಹಾರಗಳು’, ‘ಅನುಭವ ಮಂಟಪ ಮತ್ತು ಮಹಿಳಾ ಮೀಸಲಾತಿ’ ಕುರಿತು ಉಪನ್ಯಾಸ, ಚರ್ಚಾಗೋಷ್ಠಿಗಳು ನಡೆಯಲಿವೆ.
ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಶನಿವಾರ ಚಾಲನೆ ನೀಡುವರು.
ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರಿಗೆ ಡಾ.ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿ, ಬಿ.ವಿ. ಶಿರೂರ ಅವರಿಗೆ ಡಾ.ಎಂ.ಎಂ. ಕಲಬುರಗಿ ಸಾಹಿತ್ಯ ಸಂಶೋಧನಾ ರಾಷ್ಟ್ರೀಯ ಪ್ರಶಸ್ತಿ ಹಾಗೂ ಇಸ್ರೊ ಅಧ್ಯಕ್ಷ ಎಸ್. ಸೋಮನಾಥ ಅವರಿಗೆ ಅನುಭವ ಮಂಟಪ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.