ಬಸವಕಲ್ಯಾಣ: ‘ಗುರುಕೃಪೆ ಇದ್ದಲ್ಲಿ ಭಗವಂತನ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಸಂತರ, ಶರಣರ ಸಂಗ ಮಾಡುವುದು ಅಗತ್ಯ’ ಎಂದು ಕೇಂದ್ರ ಸಚಿವೆ ಸಾದ್ವಿ ನಿರಂಜನಜ್ಯೋತಿ ಹೇಳಿದರು.
ತಾಲ್ಲೂಕಿನ ಮುಚಳಂಬದಲ್ಲಿ ಭಾನುವಾರ ನಡೆದ ನಾಗಭೂಷಣ ಶಿವಯೋಗಿಗಳ 50 ನೇ ಸ್ಮರಣೋತ್ಸವ ಹಾಗೂ ಪ್ರಣವಾನಂದ ಸ್ವಾಮೀಜಿಯ ಅವರ ಸುವರ್ಣ ಮಹೋತ್ಸವದಲ್ಲಿ ಅವರು ಮಾತನಾಡಿದರು.
‘ಭಗವಂತನನ್ನು ಹುಡುಕುತ್ತಾ ಹರಿದ್ವಾರ, ರಾಮೇಶ್ವರಕ್ಕೆ ಹೋಗಿ ಹಣ, ಸಮಯ ವ್ಯರ್ಥ ಮಾಡದೇ ಸತ್ಸಂಗದಲ್ಲಿ ಪಾಲ್ಗೊಂಡರೆ ಇಲ್ಲೆ ಕಾಣಬಹುದು. ಮಾನಸ ಸರೋವರದಲ್ಲಿ ದೇಹದ ಮಲೀನತೆ ಕಳೆಯಬಹುದು. ಆದರೆ, ಇಂಥಲ್ಲಿ ಬಂದರೆ ಮನಸ್ಸು ಶುದ್ಧಗೊಳ್ಳುತ್ತದೆ. ಈ ಭಾಗ ಹೈದರಾಬಾದ್ ನಿಜಾಮರಿಂದ ಮುಕ್ತಿ ಹೊಂದುವಲ್ಲಿ ಸರ್ದಾರ್ ಪಟೇಲ್ ಅವರ ಪ್ರಯತ್ನ ಬಹಳಷ್ಟಿದೆ. ಇಲ್ಲಿ ಅವರ ಪ್ರತಿಮೆ ಸ್ಥಾಪನೆಗೆ ಸಹಕಾರ ನೀಡಲಾಗುವುದು’ ಎಂದರು.
ಬೀದರ್ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ಇದು ಸಾಮಾಜಿಕ ಸಮಾನತೆಯ ಹರಿಕಾರ ಹಾಗೂ ಅನುಭವ ಮಂಟಪ ಸ್ಥಾಪಿಸಿದ ಬಸವಣ್ಣನವರ ನೆಲವಾಗಿದೆ. ಅವರ ತತ್ವ ಪಾಲನೆ ಅಗತ್ಯ’ ಎಂದರು.
ಮಠಾಧಿಪತಿ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ‘ನಾಗಭೂಷಣ ಶಿವಯೋಗಿಗಳು ಸರ್ವಸಮಾನತೆಯ ಆರೂಢ ಪರಂಪರೆ ಎತ್ತಿ ಹಿಡಿದಿದ್ದರು. ಕೈಯಲ್ಲಿ ಕಾಯಕ, ಮನದಲ್ಲಿ ಪ್ರೇಮ, ಹೃದಯದಿಂದ ದೇವರ ನಾಮಸ್ಮರಣೆ ಮಾಡಿದರೆ ಜೀವನ ಸಫಲವಾಗುತ್ತದೆ’ ಎಂದು ಹೇಳಿದರು.
ಹಿರಿಯ ಮುಖಂಡ ಶಿವರಾಜ ನರಶೆಟ್ಟಿ, ಎಐಸಿಸಿ ಸದಸ್ಯ ಆನಂದ ದೇವಪ್ಪ, ಗಣೇಶಾನಂದ ಸ್ವಾಮೀಜಿ, ಕಾದರಹಳ್ಳಿ ಫಾಲಾಕ್ಷ, ಹಂಪಿ ವಿದ್ಯಾನಂದ ಭಾರತಿ ಸ್ವಾಮೀಜಿ, ಹುಬ್ಬಳ್ಳಿ ರಮಾನಂದ ಭಾರತಿ ಸ್ವಾಮೀಜಿ ಮಾತನಾಡಿದರು.
ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಪ್ರಕಾಶ ಪಾಗೋಜಿ ಹಾಗೂ ಡೀನ್ ಪ್ರೊ.ವಿ.ಗಿರೀಶಚಂದ್ರ ಅವರಿಗೆ ‘ಪ್ರಣವಶ್ರೀ ಪ್ರಶಸ್ತಿ’ ನೀಡಲಾಯಿತು.