ಬೀದರ್: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕವು ನಗರದಲ್ಲಿ ಬುಧವಾರ ಪಕ್ಷದ ಹಿರಿಯ ಮುಖಂಡರನ್ನು ಸನ್ಮಾನಿಸುವ ಮೂಲಕ ಬಿಜೆಪಿಯ 42ನೇ ಸಂಸ್ಥಾಪನಾ ದಿನವನ್ನು ವಿಶಿಷ್ಟವಾಗಿ ಆಚರಿಸಿತು.
ಯುವ ಮೋರ್ಚಾ ಪದಾಧಿಕಾರಿಗಳು ಹಿರಿಯ ಮುಖಂಡರಾದ ಬಾಬುರಾವ್ ಮದಕಟ್ಟಿ ಹಾಗೂ ಎನ್.ಆರ್. ವರ್ಮಾ ಅವರ ಮನೆಗೆ ತೆರಳಿ ಶಾಲು ಹೊದಿಸಿ ಸನ್ಮಾನಿಸಿದರು.
ಮದಕಟ್ಟಿ ಹಾಗೂ ವರ್ಮಾ ಅವರು ಜಿಲ್ಲೆಯ ಪಕ್ಷದ ಹಿರಿಯ ಮುಖಂಡರಾಗಿದ್ದಾರೆ. ಜನ ಸಂಘ ಹಾಗೂ ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಳಮಟ್ಟದಿಂದ ಪಕ್ಷದ ಸಂಘಟನೆ ಬಲಪಡಿಸಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹೀಗಾಗಿ ಪಕ್ಷದ ಸಂಸ್ಥಾಪನಾ ದಿನದಂದು ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ ಎಂದು ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಶೇಕಾಪೂರ ಹೇಳಿದರು.
ಯುವ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ರಾಕೇಶ ಪಾಟೀಲ, ತಾನಾಜಿ ಸಾಗರ್, ಬಾಲಾಜಿ ಪಾಟೀಲ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ನಗರ ಘಟಕದ ಅಧ್ಯಕ್ಷ ಅಂಬರೀಷ್ ಬಟನಾಪುರೆ, ಪುಷ್ಪಕ್ ಜಾಧವ್ ಮತ್ತಿತರರು ಇದ್ದರು.