ಭಾಲ್ಕಿ: ಶರಣ ಸಂಸ್ಕೃತಿಯಲ್ಲಿ ಶರಣರು ದಾಂಪತ್ಯ ಜೀವನಕ್ಕೆ ಶ್ರೇಷ್ಠ ಸ್ಥಾನ ನೀಡಿದ್ದಾರೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಸುಮನಬಾಯಿ ಬಾಬುರಾವ್ ಜಲ್ದೆ ಅವರ ಸುವರ್ಣ ಮಹೋತ್ಸವ ಮತ್ತು ವಚನ ಸ್ಫೂರ್ತಿ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವೈವಾಹಿಕ ಜೀವನದಲ್ಲಿ ದಂಪತಿ ನಡುವೆ ಪರಸ್ಪರ ತಿಳುವಳಿಕೆ, ಹೊಂದಾಣಿಕೆ, ಕಾಳಜಿ ಇದ್ದರೇ ಉತ್ತಮ ಕುಟುಂಬ ನಿರ್ವಹಣೆ, ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಅಂತಹ ಸಾರ್ಥಕ ಜೀವನವನ್ನು ಸುಮನಬಾಯಿ ಬಾಬುರಾವ ಜಲ್ದೆ ಸಾಗಿಸುತ್ತ ಎಲ್ಲರಿಗೂ ಆದರ್ಶ ಆಗಿದ್ದಾರೆ. ವಚನ ಸ್ಪೂರ್ತಿ ಗ್ರಂಥವನ್ನು ಪ್ರತಿಯೊಬ್ಬರು ಅಧ್ಯಯನ ಮಾಡಿ ತಮ್ಮ ಜೀವನ ಉತ್ತಮವಾಗಿ ರೂಪಿಸಿ ಕೊಳ್ಳಬೇಕು ಎಂದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಹಿರೇಮಠ ಸಂಸ್ಥಾನದ ಸಾಮಾಜಿಕ ಕಾರ್ಯಗಳು ಮಾದರಿಯಾಗಿವೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ನಡೆದಿದೆ. ಪಟ್ಟದ್ದೇವರು ಕರ್ನಾಟಕ ಸೇರಿ ನೆರೆಯ ರಾಜ್ಯಗಳಲ್ಲಿ ಬಸವತತ್ವದ ಪ್ರಚಾರ ಪ್ರಸಾರದ ಜತೆಗೆ ಜನರಲ್ಲಿ ಮಾನವೀಯ ಮೌಲ್ಯ ತುಂಬುವ ಕೆಲಸ ಮಾಡುತ್ತಿರುವುದು ಮಾದರಿ ಎನಿಸಿದೆ ಎಂದರು.
ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿ ಮಾತನಾಡಿದರು.
ಮುಖಂಡ ಪ್ರಸನ್ನ ಖಂಡ್ರೆ ಅಧ್ಯಕ್ಷತೆ ವಹಿಸಿದ್ದರು. ಕಿಶನರಾವ್ ಪಾಟೀಲ ಇಂಚೂರಕರ್ ಇದ್ದರು.
ಸುಮನಬಾಯಿ ಬಾಬುರಾವ್ ಜಲ್ದೆ ದಂಪತಿ ಬಸವ ಗುರುವಿನ ಪೂಜೆ ನೆರವೇರಿಸಿದರು. ಈಶ್ವರ ಜಲ್ದೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿ, ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.